ಲಕ್ನೋ: ಮನೆಯೊಳಗೆಯೇ 80 ವರ್ಷದ ವೃದ್ಧೆಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಶಹಜಾನ್ ಪುರದಲ್ಲಿ ನಡೆದಿದೆ.
ಮಗ ತನ್ನ ತಾಯಿಯನ್ನು ಮನೆಯೊಳಗೆ ಕೂಡಿಹಾಕಿದ್ದರಿಂದ ಆಕೆ ಹಸಿವಿನಿಂದಲೇ ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಶಹಜಾನ್ ಪುರದ ರೈಲ್ವೇ ಕಾಲೊನಿಯಲ್ಲಿ ವೃದ್ಧೆ ವಾಸಿಸುತ್ತಿದ್ದ ಮನೆಯೊಳಗಿಂದ ಭಾನುವಾರ ಕೊಳೆತ ವಾಸನೆ ಬರುತ್ತಿತ್ತು. ಇದರಿಂದ ಗಾಬರಿಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ಮೃತ ವೃದ್ಧೆಯ ಪುತ್ರ ಸಲಿಲ್ ಚೌಧರಿ ರೈಲ್ವೇ ಉದ್ಯೋಗಿಯಾಗಿದ್ದು, ಕೆಲ ದಿನಗಳಿಂದ ಆತ ಮನೆಯ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರಲಿಲ್ಲ. ತಾಯಿ ಮೃತಪಟ್ಟ ಬಳಿಕವೇ ಆತ ಅಲ್ಲಿಂದ ಪರಾರಿಯಾಗಿರಬೇಕು ಅಂತ ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ ಚೌಧರಿ ಟಿಕೆಟ್ ಕಲೆಕ್ಟ್ ಮಾಡುತ್ತಿದ್ದನು. ಅನುಮತಿ ಇಲ್ಲದೇ ರಜೆ ತೆಗೆದುಕೊಳ್ಳುತ್ತಿದ್ದರಿಂದ ಈ ಹಿಂದೆ 2 ಬಾರಿ ಆತನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಕಳೆದ 2 ತಿಂಗಳಿನಿಂದ ಆತ ಕೆಲಸಕ್ಕೆ ಹಾಜರಾಗುತ್ತಿರಲಿಲ್ಲ ಅಂತ ಸ್ಟೇಷನ್ ಮಾಸ್ಟರ್ ತಿಳಿಸಿದ್ದಾರೆ.
ಮೂಲತಃ ಲಕ್ನೋ ನಿವಾಸಿಯಾಗಿರೋ ಚೌಧರಿ 2005ರಲ್ಲಿ ಶಹಜಾನ್ ಪುರಕ್ಕೆ ಬಂದಿದ್ದಾನೆ. ಸದ್ಯ ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇತ್ತ ಪಾಪಿ ಮಗನ ಪತ್ತೆಗೆ ಬಲೆ ಬೀಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv