ಬಳ್ಳಾರಿ: ಇ-ಸ್ವತ್ತಿಗಾಗಿ 80ರ ಇಳಿ ವಯಸ್ಸಿನಲ್ಲೂ ಅಜ್ಜಿ ಗ್ರಾಮ ಪಂಚಾಯಿತಿಗೆ ಅಲೆದು ಸುಸ್ತಾಗಿದ್ದಾರೆ. ಆದರೆ, ಯಾವೊಬ್ಬರೂ ಅಧಿಕಾರಿಗಳು ಅಜ್ಜಿಯ ಮನವಿಗೆ ಸ್ಪಂದಿಸಿಲ್ಲ.
ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಎರಡನೇ ವಾರ್ಡ್ ನಿವಾಸಿ 80ರ ವಯಸ್ಸಿನ ಅಜ್ಜಿ ಪಾರ್ವತಮ್ಮ ಇ-ಸ್ವತ್ತಿಗಾಗಿ ಅದೆಷ್ಟೋ ಬಾರಿ ಗ್ರಾಪಂ ಬಾಗಿಲು ತಟ್ಟಿದ್ದಾಳೆ. ಹಿರೇಹಡಗಲಿ ಗ್ರಾಮದ ಡೋರ್ ನಂ.82/B ಹೆಸರಿನ ಖಾಲಿ ಜಾಗ ಕಳೆದ ನಾಲ್ಕು ತಲೆಮಾರಿನಿಂದ ಅಜ್ಜಿ ಪಾರ್ವತಮ್ಮ ಸಂಬಂಧಿಕರ ಹೆಸರಿನಲ್ಲೇ ಇದೆ. ತನ್ನದೇ ಕುಟುಂಬಸ್ಥರ ಹೆಸರಿಗಿರೋ ಆಸ್ತಿಯನ್ನ ಪಾರ್ವತಮ್ಮ ತನ್ನ ಹೆಸರಿಗೆ ಮಾಡಿಕೊಳ್ಳಲು ಕಳೆದ 40 ವರ್ಷದಿಂದ ಏಕಾಂಗಿ ಪ್ರಯತ್ನ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಯಾವುದೇ ಪಿಡಿಓ ಬಂದ್ರೂ ಅಜ್ಜಿಯನ್ನ ಸತಾಯಿಸುತ್ತಲೇ ಬರ್ತಿದ್ದಾರೆ. ಬರೀ ಭರವಸೆ ಕೊಡ್ತಿರೋ ಪಿಡಿಓಗಳು ಇಸ್ವತ್ತು ಮಾಡಿಕೊಡಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ನಡೆಗೆ ಬೇಸತ್ತಿರೋ ಪಾರ್ವತಮ್ಮ ಹಿರೇಹಡಗಲಿ ಗ್ರಾಪಂ ಎದುರು 80ರ ಇಳಿವಯಸ್ಸಿನಲ್ಲೂ ನನ್ನ ಆಸ್ತಿಗೆ ಇ-ಸ್ವತ್ತು ಕೊಡಿ ಅಂತ ಹೋರಾಟಕ್ಕೆ ಕುಳಿತಿದ್ದಾಳೆ.
82/B ಆಸ್ತಿಯ ಸಂಬಂಧಿಸಿದಂತೆ ಹೋರಾಟಕ್ಕೆ ಕುಳಿತಿರೋ ಅಜ್ಜಿ ಪಾರ್ವತಮ್ಮ ಅವರ ಸಾಕ್ಷಿ ಸಹಿ ಪಡೆದು ನಾಲ್ಕು ದಿಕ್ಕಿನ ಜನ ಇ-ಸ್ವತ್ತು ಪಡೆದಿದ್ದಾರೆ. ಅಲ್ಲಿ ಪಾರ್ವತಮ್ಮ ಅವರ ಜಾಗ ಇಲ್ಲದೇ ಇದ್ದಿದ್ರೆ ಅವರಿಂದ ಸಾಕ್ಷಿ ಸಹಿಯ ಅವಶ್ಯಕತೆಯೂ ಇರಲಿಲ್ಲ. ಇದು ಅಧಿಕಾರಿಗಳ ದ್ವಂದ್ವ ನೀತಿಗೆ ಕಾರಣವಾಗಿದೆ. ಆದರೆ ಈಗ ಪಾರ್ವತಮ್ಮ ತಮ್ಮ ಜಾಗಕ್ಕೆ ಇ-ಸ್ವತ್ತು ಪಡೆಯಲು ಬಂದಾಗ ಅದು ಶೌಚಾಲಯ ಜಾಗ, ಪಾರ್ವತಮ್ಮ ಹೆಸರಿಗೆ ಇ-ಸ್ವತ್ತು ಕೊಡಬೇಡಿ ಅಂತ ಯಾರಿಂದಲೋ ತಕರಾರು ಬಂದಿದೆಯಂತೆ. ಹೀಗಾಗಿ ಪಿಡಿಓ ಮಾಡಲ್ಲ ಅಂತಿದ್ದಾರೆ. ಇದು ನಾಲ್ಕು ತಲೆಮಾರಿಂದ ನಮ್ಮದೇ ಜಾಗ. ಅದಕ್ಕೆ ಬೇಕಾದ ದಾಖಲೆ ನಮ್ಮತ್ರ ಇವೆ ಅಂತಿದ್ದಾರೆ ಪಾರ್ವತಮ್ಮ ಪುತ್ರ ಗಂಗಾಧರಯ್ಯ.
ಇಳಿ ವಯಸ್ಸಿನಲ್ಲಿ ಪ್ರತಿಭಟನೆ ಮಾಡ್ತಿರೋ ಈ ಪಾರ್ವತಮ್ಮ ಪುತ್ರ ಹಾಗೂ ಸೊಸೆ ಇಬ್ಬರೂ ಇದೇ ಹಿರೇಹಡಗಲಿ ಗ್ರಾಪಂ ಸದಸ್ಯರಿದ್ದಾರೆ. ಇಬ್ಬರು ಜನಪ್ರತಿನಿಧಿಗಳು ಮನೆಯಲ್ಲೇ ಇದ್ದರೂ ಇಳಿವಯಸ್ಸಿನ ಪಾರ್ವತಮ್ಮಗೆ ಇ-ಸ್ವತ್ತು ಮಾಡಿಕೊಡಿಸಲು ಸಾದ್ಯ ಆಗ್ತಿಲ್ಲ. ಇದರ ನಡುವೆ ಸರ್ಕಾರದ ನೀತಿನಿಯಮಗಳನ್ನ ಅರಿಯದ ಅಧಿಕಾರಿಗಳು ನಾಲ್ಕು ತಲೆಮಾರಿನಿಂದ ವಾಸ ಮಾಡುವ ಜಾಗಕ್ಕೆ ಇಸ್ವತ್ತು ಕೊಡಲು ಹಿಂದೇಟು ಹಾಕುತ್ತಿರುವುದು ಯಾಕೆ ಎಂಬ ಪ್ರಶ್ನೆ ವ್ಯಕ್ತವಾಗಿದೆ.