ಮಥುರಾ: ಕ್ರಿಮಿನಲ್ಗಳು ಹಾಗೂ ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ 8 ವರ್ಷದ ಬಾಲಕನಿಗೆ ಗುಂಡೇಟು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ಬುಧವಾರ ಸಂಜೆ ನಡೆದಿದೆ.
ಮಾಧವ್ ಭಾರದ್ವಾಜ್ ಸಾವನ್ನಪ್ಪಿದ ಬಾಲಕ. ರಾಜ್ಯ ರಾಜಧಾನಿ ಲಕ್ನೋದಿಂದ 450 ಕಿ.ಮೀ ದೂರದ ಗ್ರಾಮದಲ್ಲಿ ದರೋಡೆಯಲ್ಲಿ ಭಾಗಿಯಾಗಿದ್ದ ಗ್ಯಾಂಗ್ಸ್ಟರ್ಗಳು ಅಡಗಿಕೊಂಡಿದ್ದರು. ಪೊಲೀಸರು ಹಾಗೂ ಗ್ಯಾಂಗ್ಸ್ಟರ್ಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಮಾಧವ್ನ ತಲೆಗೆ ಗುಂಡೇಟು ಬಿದ್ದು ಸಾವನ್ನಪ್ಪಿದ್ದಾನೆ. ಆದ್ರೆ ಮಾಧವ್ಗೆ ಗುಂಡೇಟು ಬಿದ್ದಿದ್ದು ಪೊಲೀಸರಿಂದಲೋ ಅಥವಾ ಆರೋಪಿತ ಗ್ಯಾಂಗ್ಸ್ಟರ್ಗಳಿಂದಲೋ ಎಂಬುದು ಸ್ಪಷ್ಟವಾಗಿಲ್ಲ.
ದರೋಡೆಕೋರರು ಗ್ರಾಮದಲ್ಲಿ ಅಡಗಿದ್ದಾರೆಂಬ ಮಾಹಿತಿಯ ಆಧಾರದ ಮೇಲೆ ನಮ್ಮ ತಂಡ ಅಲ್ಲಿಗೆ ಹೋಗಿತ್ತು. ಆರೋಪಿಗಳಿಗೆ ಶರಣಾಗುವಂತೆ ಹೇಳಿದ್ದರು. ಆದ್ರೆ ಅವರು ಗುಂಡಿನ ದಾಳಿ ಆರಂಭಿಸಿದ್ರು ಎಂದು ಪೊಲೀಸರು ಹೇಳಿದ್ದಾರೆ.
ಆದ್ರೆ ಪೊಲೀಸರೇ ಆರೋಪಿಗಳಿಗೆ ಒಂದು ಕಡೆ ಸೇರಲು ಹೇಳಿ ಗುಂಡಿನ ದಾಳಿ ಶುರುಮಾಡಿದ್ರು ಎಂದು ಗ್ರಾಮಸ್ಥರು ಹೇಳಿದ್ದಾಗಿ ವರದಿಯಾಗಿದೆ. ಅಧಿಕಾರಿಗಳು ಇದನ್ನ ನಿರಾಕರಿಸಿದ್ದಾರೆ. ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆಂದು ವರದಿಯಾಗಿದೆ.
ಬುಲೆಟ್ ತಾಗಿದ ವೇಳೆ ಬಾಲಕ ತನ್ನ ಸ್ನೇಹಿತರೊಂದಿಗೆ ಮನೆಯ ಬಳಿ ಆಟವಾಡುತ್ತಿದ್ದ. ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ಕೆಲವೇ ನಿಮಿಷಗಳಲ್ಲಿ ಆತ ಸಾವನ್ನಪ್ಪಿದ ಎಂದು ಬಾಲಕನ ಕುಟುಂಬಸ್ಥರು ಹೇಳಿದ್ದಾರೆ.
ಕುಟುಂಬಸ್ಥರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಾಲಕನ ಕುಟುಂಬಕ್ಕೆ ಪೊಲೀಸರು 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ. ಕುಟುಂಬಕ್ಕೆ ನನ್ನ ಬೆಂಬಲವಿದೆ. ಡಿಸಿಪಿ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಇದರಲ್ಲಿ ಪೊಲೀಸರ ನಿರ್ಲಕ್ಷ್ಯವಿತ್ತಾ ಎಂಬುದನ್ನ ಪತ್ತೆ ಮಾಡಲಿದ್ದಾರೆ. ಮರಣೊತ್ತರ ಪರೀಕ್ಷೆಯ ವರದಿ ಬಂದ ನಂತರ ಯಾರ ಗುಂಡಿನಿಂದ ಬಾಲಕ ಮೃತಪಟ್ಟಿದ್ದಾನೆ ಎಂಬುದು ಗೊತ್ತಾಗಲಿದೆ ಅಂತ ಪೊಲೀಸ್ ಅಧಿಕಾರಿ ಸ್ವಪ್ನಿಲ್ ಹೇಳಿದ್ದಾರೆ.