ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಸಚಿವ ಹಾಗೂ 8 ಬಾರಿ ಶಾಸಕರಾಗಿದ್ದ ಹರ್ಬನ್ಸ್ ಕಪೂರ್(75) ನಿಧನರಾಗಿದ್ದಾರೆ.
ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದ ಬಿಜೆಪಿ ನಾಯಕನಿಗೆ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹರ್ಬನ್ಸ್ ಕಪೂರ್ ಸರಳ ಹಾಗೂ ಮೃದು ಸ್ವಭಾವದವರು. ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವಾಗಲೂ ಧ್ವನಿ ಎತ್ತುತ್ತಿದ್ದರು ಎಂದು ಹೇಳಿದರು.
ಹರ್ಬನ್ಸ್ ಕಪೂರ್ ಅವರು ರಾಜ್ಯದ ವಿಧಾನಸಭೆಯಲ್ಲಿ ಡೆಹ್ರಾಡೂನ್ ಕ್ಯಾಂಟ್ ಕ್ಷೇತ್ರವನ್ನು ಪ್ರತಿನಿಧಿಸಿದ್ದು, 2007 ರಿಂದ 2012ರ ವರೆಗೆ ಸ್ಪೀಕರ್ ಆಗಿದ್ದರು. ಇವರು ಉತ್ತರಾಖಂಡ್ ರಚನೆಗೂ ಮೊದಲೇ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ 4 ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಉತ್ತರಾಖಂಡ್ ರಚನೆಯ ಬಳಿಕವೂ ರಾಜಕೀಯದಲ್ಲಿ ಒಬ್ಬ ಯಶಸ್ವಿ ವ್ಯಕ್ತಿಯಾಗಿ ಮತ್ತೆ 4 ಬಾರಿ ಶಾಸಕರಾಗಿದ್ದರು. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ
ಹರ್ಬನ್ಸ್ ಕಪೂರ್ ತಮ್ಮ ರಾಜಕೀಯ ಜೀವನದಲ್ಲಿ 4 ದಶಕಗಳನ್ನು ಪೂರೈಸಿದ್ದಾರೆ. ಇವರು 1991ರಲ್ಲಿ ಉತ್ತರ ಪ್ರದೇಶದ ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿಯ ಸಚಿವರಾಗಿದ್ದರು. ಹಾಗೂ 1001ರಲ್ಲಿ ಉತ್ತರಾಖಂಡದ ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ಸಲ್ಲಿಸಿದ್ದಾರೆ. ಇತ್ತೀಚೆಗೆ ಅಂದರೆ ಡಿಸೆಂಬರ್ 9 ರಂದು ಉತ್ತರಾಖಂಡದ ಮೂರು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಭಾರತ ಹಿಂದುಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದು: ಓವೈಸಿ