– ಇಸ್ಲಾಮಾಬಾದ್ ಸ್ಫೋಟದಿಂದ ಭೀತಿ; ಭದ್ರತೆ ಬಗ್ಗೆ ಆಟಗಾರರಲ್ಲಿ ಕಳವಳ
ಇಸ್ಲಾಮಾಬಾದ್: ಇಲ್ಲಿ ನಡೆದ ಮಾರಕ ಬಾಂಬ್ ಸ್ಫೋಟದ ನಂತರ ಸುರಕ್ಷತಾ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಶ್ರೀಲಂಕಾ ಆಟಗಾರರು ತಮ್ಮ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪಾಕ್ ವರ್ಸಸ್ ಶ್ರೀಲಂಕಾ ಏಕದಿನ ಸರಣಿಯು ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಮೂರು ಪಂದ್ಯಗಳ ಸರಣಿಯ 2ನೇ ಮ್ಯಾಚ್ ಗುರುವಾರ ನಡೆಯಬೇಕಿತ್ತು. ಆದರೆ, ಇಸ್ಲಾಮಾಬಾದ್ನಲ್ಲಿ ನಡೆದ ಮಾರಕ ಬಾಂಬ್ ಸ್ಫೋಟದ ನಂತರ ಭದ್ರತಾ ಭೀತಿ ಎದುರಾಗಿದೆ. ಶ್ರೀಲಂಕಾದ 8 ಆಟಗಾರರು ಸರಣಿಯನ್ನು ಅರ್ಧದಲ್ಲೇ ಕೈಬಿಟ್ಟು ತವರು ಸೇರಲು ಬಯಸಿದ್ದಾರೆ. ಈ ಸಂಬಂಧ ತಮ್ಮ ಕ್ರಿಕೆಟ್ ಮಂಡಳಿಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.
ನಾಳೆ ರಾವಲ್ಪಿಂಡಿಯಲ್ಲಿ 2ನೇ ಪಂದ್ಯ ನಡೆಯುವುದು ಅನುಮಾನ ಎನ್ನುವಂತಾಗಿದೆ. ಸರಣಿಯನ್ನು ಮುಂದುವರಿಸುವ ಪ್ರಯತ್ನದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಬದಲಿ ಆಟಗಾರರನ್ನು ಕರೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ಮಂಗಳವಾರ ರಾವಲ್ಪಿಂಡಿಯಲ್ಲಿ ನಡೆದ ಆರಂಭಿಕ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾವನ್ನು ಆರು ರನ್ಗಳಿಂದ ಸೋಲಿಸಿತು. ಇಸ್ಲಾಮಾಬಾದ್ ಅವಳಿ ನಗರದಲ್ಲಿ ಆತ್ಮಾಹುತಿ ದಾಳಿಯ ಹೊರತಾಗಿಯೂ ಈ ಪಂದ್ಯ ಮುಂದುವರೆಯಿತು.
ದಾಳಿಯ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ. ಉಳಿದ ಪಂದ್ಯಗಳು ಗುರುವಾರ ಮತ್ತು ಶನಿವಾರ ರಾವಲ್ಪಿಂಡಿಯಲ್ಲಿ ನಡೆಯಲಿವೆ. ಆದರೆ, ಆಟಗಾರರು ಪಂದ್ಯವನ್ನಾಡಲು ಹಿಂಜರಿಯುತ್ತಿದ್ದಾರೆ. ಸ್ಫೋಟ ಬೆಳವಣಿಗೆಯಿಂದಾಗಿ ಎರಡನೇ ಏಕದಿನ ಪಂದ್ಯ ನಡೆಯುವುದಿಲ್ಲ. ಏಕದಿನ ಪಂದ್ಯಗಳು ನಡೆಯುತ್ತಿರುವ ರಾವಲ್ಪಿಂಡಿ ಇಸ್ಲಾಮಾಬಾದ್ಗೆ ಹತ್ತಿರವಾಗಿರುವುದರಿಂದ ಆಟಗಾರರು ಮನೆಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ನ್ಯಾಯಾಂಗ ಸಂಕೀರ್ಣದಲ್ಲಿ ಪ್ರಬಲ ಸ್ಫೋಟ ಸಂಭವಿಸಿ 12 ಜನರು ಸಾವನ್ನಪ್ಪಿದರು ಮತ್ತು 27 ಜನರು ಗಾಯಗೊಂಡರು. ಸ್ಥಳೀಯ ಮಾಧ್ಯಮಗಳು ಇದು ಆತ್ಮಹತ್ಯಾ ದಾಳಿ ಎಂದು ವರದಿ ಮಾಡಿವೆ.

