ಮಡಿಕೇರಿ: ಚಾಲಕನೋರ್ವನ ನಿಯಂತ್ರಣ ತಪ್ಪಿ ಕಾರೊಂದು (Car) ರಸ್ತೆ ಬದಿಯಲ್ಲಿರುವ ಕೆರೆಗೆ ಬಿದ್ದು, ಕಾರಿನಲ್ಲಿದ್ದ 8 ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ (Somavarapete) ತಾಲೂಕಿನ ಯಡೂರು ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಹಾನಗಲ್ಲು ಗ್ರಾಮದ ನಿವಾಸಿ ಶಿವಣ್ಣ ಎಂಬವರು ತಮ್ಮ ತೋಟದಲ್ಲಿ ಕಾಫಿ (Coffee) ಕೊಯ್ದು, ಸಂಜೆ ಯಡೂರು ಮಾರ್ಗವಾಗಿ ಬರುವಾಗ ಸೋಮವಾರಪೇಟೆ-ಶಾಂತಳ್ಳಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಯಡೂರು ಕೆರೆಗೆ ಬಿದ್ದಿದೆ. ಕಾರಿನೊಳಗಿದ್ದವರು ಕಿಟಕಿಗಳನ್ನು ಒಡೆದು ಹೊರಬರುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ.
ಮದಲಾಪುರದ ಜ್ಯೋತಿ, ಲಕ್ಷ್ಮಿ, ಮನು, ಸೀತಮ್ಮ, ರತಿ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ನಂತರ ಮಡಿಕೇರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ
ಭದ್ರತಾ ಬೇಲಿ ಅಳವಡಿಸಲು ಒತ್ತಾಯ: ಕರೆಯು ರಸ್ತೆಯ ಅಂಚಿನಲ್ಲಿದ್ದು, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಬೆಟ್ಟಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವುದರಿಂದ ಯಾವುದೇ ಸಂಭವಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಕೆರೆಯ ಸುತ್ತ ಭದ್ರತಾ ಬೇಲಿ ಅಳವಡಿಸಬೇಕೆಂದು ಯಡೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.