ಕಾಸರಗೋಡು: ಕಾಸರಗೋಡಿನಿಂದ ವೆಲಾಂಕಣಿಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಒಂದು ವರ್ಷದ ಮಗು ಸೇರಿ 8 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 5 ಗಂಟೆ ವೇಳೆಗೆ ತಮಿಳುನಾಡಿನ ವೆಲಾಂಕಣಿ ಸಮೀಪದ ಕರೂರು ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬಂದ್ಯೋಡು ಮಂಡೆಕಾಪುವಿನ ಹೆರಾಲ್ಡ್ ಮೊಂತೆರೋ (50), ಪತ್ನಿ ಪ್ರಸಿಲ್ಲಾ ಮೊಂತೆರೋ (40), ಹೆರಾಲ್ಡ್ ಸಹೋದರ ಕ್ಯಾತರೀನ್ ಮೊಂತೆರೋ (40), ಪತ್ನಿ ಜಸ್ಮ (30), ಇವರ ಒಂದು ವರ್ಷದ ಮಗು ಸಾನ್ವಿ, ಶಾರೋನ್ (5), ಕುಟುಂಬ ಸದಸ್ಯರಾದ ಅಲ್ವಿನ್ ಮೊಂತೆರೋ (29), ಪತ್ನಿ ಪ್ರೀಮಾ ಮೊಂತೆರೋ (22) ಮೃತಪಟ್ಟವರು.
ವೆಲಾಂಕಣಿಗೆ ಹೋಗಿ ವಾಪಸ್ ಬರುತ್ತಿದ್ದ ಮಹಾರಾಷ್ಟ್ರ ನೋಂದಣಿಯ ಕ್ವಾಲಿಸ್ ಕಾರಿಗೆ ಎದುರುಗಡೆಯಿಂದ ಬಂದ ಲಾರಿ ರಭಸದಿಂದ ಡಿಕ್ಕಿಯಾಗಿದೆ. ಇದರ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ವಿವರ ತಿಳಿದು ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಆಗಮಿಸಿದರೂ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದು ಮರಣೋತ್ತರ ಪರೀಕ್ಷೆ ಬಳಿಕ ಕಾಸರಗೋಡಿಗೆ ರವಾನೆಯಾಗಲಿದೆ.
ಒಟ್ಟು 11 ಮಂದಿ ಕ್ವಾಲಿಸ್ ನಲ್ಲಿ ವೆಲಾಂಕಣಿಗೆಂದು ತೆರಳಿದ್ದರು. ಮಹಾರಾಷ್ಟ್ರ ಮೂಲದವರಾದ ಹೆರಾಲ್ಡ್ ಹಾಗೂ ಕುಟುಂಬಸ್ಥರು ಕಳೆದ 10 ವರ್ಷಗಳಿಂದ ಮಂಡೆಕಾಪುವಿನಲ್ಲಿ ವಾಸವಾಗಿದ್ದರು.