ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಪತ್ತೆಯಾಗಿದೆ.
ರತ್ನಗಿರಿಯ ಚಿಪ್ಲುನ್ನ ಪ್ರವಾಸಿ ರೆಸಾರ್ಟಿನ ಚರಂಡಿಯಲ್ಲಿ 8 ಅಡಿ ಮೊಸಳೆಯನ್ನು ಕಂಡು ಜನರು ದಂಗಾಗಿ ಹೋಗಿದ್ದಾರೆ. ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯ ವೈರಲ್ ಆಗುತ್ತಿದೆ. ಈ ಘಟನೆ ಚಿಪ್ಲುನ್ನ ದಾದರ್ ನಲ್ಲಿ ನಡೆದಿದ್ದು, ಜನರು ಮೊದಲು ಇದು ಮುಂಬೈನ ಸಬ್ ಅರ್ಬನ್ ದೃಶ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ರತ್ನಗಿರಿಯಲ್ಲಿ ಜೋರಾಗಿ ಮಳೆ ಆಗಿತ್ತು. ಮಳೆಯಿಂದಾಗಿ ವಶಿಷ್ಠಿ ನದಿಯಿಂದ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಿತ್ರ ಧ್ವನಿ ಬಂದಾಗ ಅಲ್ಲಿ ಓಡಾಡುತ್ತಿದ್ದ ಜನ ಬಗ್ಗಿ ಚರಂಡಿಯನ್ನು ನೋಡಿದಾಗ ಮೊಸಳೆ ಇರುವುದನ್ನು ಗಮನಿಸಿದ್ದಾರೆ. ಮೊಸಳೆ ಇರುವುದನ್ನು ಕಂಡು ಅರಣ್ಯಾಧಿಕಾರಿ ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿದ್ದಾರೆ.
ಹವಮಾನದ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಈ ರೀತಿ ಆಗುವುದು ಸಾಮಾನ್ಯ. ಸದ್ಯ ನಾವು ಮೊಸಳೆಯನ್ನು ಸುರಕ್ಷಿತವಾಗಿ ಚರಂಡಿಯಿಂದ ಹೊರ ತೆಗೆದು ನದಿಗೆ ಬಿಟ್ಟಿದ್ದೇವೆ ಎಂದು ಅರಣ್ಯ ಅಧಿಕಾರಿ ವಿ.ಕೆ ಸುರ್ವೆ ತಿಳಿಸಿದ್ದಾರೆ.