ಬೆಳಗಾವಿ: ನಗರದ ಮರಾಠ ಮಂಡಳ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದಾಗ ಮಹಾರಾಷ್ಟ್ರದ ಮಾಲ್ವಾನ್ ಬೀಚ್ನಲ್ಲಿ ಇಂದು ಬೆಳಗ್ಗೆ ನೀರುಪಾಲಾಗಿದ್ದಾರೆ.
ಸಂತೋಷ್, ಉಜಾಮಿಲ್, ಅನಿಕೇತ್, ಕಿರಣ್, ನಿತಿನ್, ಅನಿತಾ, ಆರತಿ ಮತ್ತು ಆಕಾಂಕ್ಷ ಮೃತ ವಿದ್ಯಾರ್ಥಿಗಳು. 40 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದರು. ನೀರು ಪಾಲಾಗುತ್ತಿದ್ದ ಅವಧೂತ್, ಮಾಯಾ ಮತ್ತು ಮಹೇಶ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ಮೃತರೆಲ್ಲರೂ 22 ರಿಂದ 25 ವಯಸ್ಸಿನವರು ಎಂದು ಹೇಳಲಾಗಿದೆ.
ಇದು ಶೈಕ್ಷಣಿಕ ಪ್ರವಾಸ ಅಲ್ಲ. ನಮ್ಮ ಕಾಲೇಜಿನಿಂದ ಯಾವುದೇ ಅನುಮತಿಯನ್ನು ಕೊಟ್ಟಿಲ್ಲ. ವಿದ್ಯಾರ್ಥಿಗಳು ಖಾಸಗಿಯಾಗಿ ಪ್ರವಾಸ ಹೋಗಿದ್ದು, ಪ್ರವಾಸಕ್ಕೆ ಹೋಗಿರುವ ವಿಷಯ ನಮಗೆ ಹಾಗು ಕಾಲೇಜಿನ ಆಡಳಿತ ಮಂಡಳಿಗೆ ಗೊತ್ತಿರಲಿಲ್ಲ. ಇಂದು ಬೆಳಗ್ಗೆ 11 ಗಂಟೆಯ ವೇಳೆಯಲ್ಲಿ ನಮಗೆ ವಿಷಯ ಗೊತ್ತಾಗಿದೆ ಎಂದು ಕಾಲೇಜಿನ ಉಪನ್ಯಾಸಕಿ ರಾಜಶ್ರೀ ಹಾಲ್ಗೇಕರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಆದರೆ ಪ್ರವಾಸಕ್ಕೆಂದು ಪುಣೆಗೆ ಹೋಗಬೇಕಾಗಿದ್ದವರು ಮಾರ್ಗ ಬದಲಿಸಿ ಮಾಲ್ವಾನ್ನ ವೈರಿ ಬೀಚ್ಗೆ ಹೋಗಿದ್ದಾರೆ. ವಿದ್ಯಾರ್ಥಿಗಳ ಜೊತೆ ಮಹೇಶ್ ಎಂಬ ಕಿರಿಯ ಉಪನ್ಯಾಸಕರು ಸಹ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ ಕಾಲೇಜು ಆಡಳಿತ ಮಂಡಳಿ ಇದರ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ನೀಡುತ್ತಿಲ್ಲ. ಮೃತದೇಹಗಳನ್ನು ಮಾಲ್ವಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.