ಜೈಪುರ: ಮುಂಬೈಯಿಂದ ಜೋಧಪುರಕ್ಕೆ ತೆರಳುತ್ತಿದ್ದ ಸೂರ್ಯನಗರಿ ಎಕ್ಸ್ಪ್ರೆಸ್ ರೈಲು (Suryanagari Express) ಹಳಿತಪ್ಪಿರುವ (Derail) ಘಟನೆ ರಾಜಸ್ಥಾನದ (Rajasthan) ಪಾಲಿಯಲ್ಲಿ ಇಂದು ಮುಂಜಾನೆ ನಡೆದಿದೆ. ಅಪಘಾತದಲ್ಲಿ 10 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಜೋಧ್ಪುರ ವಿಭಾಗದ ರಾಜ್ಕಿವಾಸ್-ಬೊಮದ್ರಾ ವಿಭಾಗದ ನಡುವೆ ಇಂದು ಮುಂಜಾನೆ 3:27ರ ವೇಳೆಗೆ ಘಟನೆ ನಡೆದಿದೆ. ಬಾಂದ್ರಾ ಟರ್ಮಿನಲ್ನಿಂದ ಜೋಧ್ಪುರಕ್ಕೆ ತೆರಳುತ್ತಿದ್ದ ರೈಲಿನ 8 ಬೋಗಿಗಳು ಹಳಿ ತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. 10 ಜನರಿಗೆ ಗಾಯಗಳಾಗಿವೆ. ಅಪಘಾತದ ಬಳಿಕ ಪ್ರಯಾಣಿಕರಿಗೆ ಬೇರೆ ರೈಲಿನ ವ್ಯವಸ್ಥೆ ಮಾಡಲಾಗಿದೆ. ಉನ್ನತ ಅಧಿಕಾರಿಗಳು ಸ್ಥಳ ತಲುಪಿದ್ದು, ಜನರಲ್ ಮ್ಯಾನೇಜರ್ ನಾರ್ತ್ ವೆಸ್ಟರ್ನ್ ರೈಲ್ವೇ ಮತ್ತು ಇತರ ಉನ್ನತ ಅಧಿಕಾರಿಗಳು ಜೈಪುರದ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ
ಘಟನೆಯ ಬಗ್ಗೆ ವಿವರಣೆ ನೀಡಿರುವ ಪ್ರಯಾಣಿಕರೊಬ್ಬರು, ರೈಲು ಮಾರ್ವಾರ್ ಜಂಕ್ಷನ್ನಿಂದ ಹೊರಟ 5 ನಿಮಿಷಗಳಲ್ಲಿ ಜೋರಾದ ಶಬ್ದ ಹಾಗೂ ಕಂಪನದ ಅನುಭವವಾಯಿತು. 2-3 ನಿಮಿಷಗಳ ಬಳಿಕ ರೈಲು ನಿಂತಿತು. ನಾವು ಕೆಳಗಿಳಿದ ಸುಮಾರು 8 ಸ್ಲೀಪರ್ ಕ್ಲಾಸ್ ಕೋಚ್ಗಳು ಹಳಿತಪ್ಪಿರುವುದು ಕಂಡುಬಂತು. 15-20 ನಿಮಿಷಗಳಲ್ಲಿ ಸ್ಥಳಕ್ಕೆ ಅಂಬುಲೆನ್ಸ್ಗಳು ಬಂದವು ಎಂದು ತಿಳಿಸಿದ್ದಾರೆ.
ಈ ನಡುವೆ ರಾಜಸ್ಥಾನದಲ್ಲಿ ರೈಲು ಹಳಿ ತಪ್ಪಿದ್ದರಿಂದ ಹಲವಾರು ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಇದನ್ನೂ ಓದಿ: ಹೆಲ್ಮೆಟ್ ಆಯ್ತು, ಈಗ ಜೆಡಿಎಸ್ ಮುಖಂಡ ಆರ್. ಉಗ್ರೇಶ್ರಿಂದ ಬಾಳೆ ಹಣ್ಣು ಭಾಗ್ಯ