ಪುಣೆ: ಕಳೆದ ಒಂದು ವರ್ಷದಿಂದ ಕೊರೋನಾ ಹೆಮ್ಮಾರಿ ದಾಳಿಯಿಂದ ತತ್ತರಿಸಿ ಹೋಗಿರುವ ದೇಶ, ಇನ್ನು ಕೆಲವೇ ಕೆಲವು ದಿನಗಳಲ್ಲಿ ನಿಟ್ಟುಸಿರು ಬಿಡಲಿದೆ. ಮನುಕುಲವನ್ನು ಕಾಡಿದ ಭೀಕರ ವೈರಸ್ ಅನ್ನು ಎದುರಿಸಲು ಲಸಿಕೆ ಬಂದಾಗಿದೆ.
ನಾಲ್ಕು ದಿನಗಳಲ್ಲಿ ದೇಶಾದ್ಯಂತ ಲಸಿಕೆ ಹಾಕುವ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಶರಗವೇಗದಲ್ಲಿ ಸಿದ್ಧತೆಗಳು ನಡೆದಿವೆ. ಇದರ ಭಾಗವಾಗಿ ಇಂದು ಮೊದಲ ಕಂತಿನ ಲಸಿಕೆಗಳನ್ನು ಬೆಂಗಳೂರು ಸೇರಿದಂತೆ ದೇಶದ 13 ಪ್ರಮುಖ ನಗರಗಳಿಗೆ 8 ವಿಮಾನಗಳ ಮೂಲಕ ಸಾಗಣೆ ಮಾಡಲಾಗಿದೆ.
Ready get set go!
Stand by India!
The vaccine to kill the disease is being loaded onto the aircrafts for distribution all over the country now.@AAI_Official @aairedwr pic.twitter.com/5lY9i4Tjdk
— पुणे विमानतळ /Pune Airport (@aaipunairport) January 12, 2021
ಬೆಳಗಿನ ಜಾವ 4.30ಕ್ಕೆ ಪುಣೆಯ ಸೆರಂ ಸಂಸ್ಥೆ, ಮೂರು ಟ್ರಕ್ಗಳಲ್ಲಿ ಮೊದಲ ಕಂತಿನ ಕೋವಿಶೀಲ್ಡ್ ಲಸಿಕೆಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಿತು. ಅಲ್ಲಿಂದ ವಿಮಾನಗಳ ಮೂಲಕ ವಿವಿಧೆಡೆಗಳಿಗೆ ಲಸಿಕೆಗಳನ್ನು ಸುರಕ್ಷಿತವಾಗಿ ಸಾಗಣೆ ಮಾಡಲಾಯಿತು.
ಒಂದೆರಡು ದಿನಗಳಲ್ಲಿ ಪ್ರಮುಖ ನಗರಗಳ ಪ್ರಧಾನ ಲಸಿಕಾ ಕೇಂದ್ರದಿಂದ ಈಗಾಗಲೇ ಗುರುತಿಸಲಾದ ಆರೋಗ್ಯ ಕೇಂದ್ರಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತದೆ. ಜನವರಿ 16ರಿಂದ ಮೊದಲ ಹಂತದ ವ್ಯಾಕ್ಸಿನೇಷನ್ ಕಾರ್ಯ ಶುರುವಾಗಲಿದ್ದು, 3 ಕೋಟಿ ಕೊರೋನಾ ವಾರಿಯರ್ಸ್ಗೆ ಲಸಿಕೆ ನೀಡಲಾಗುತ್ತದೆ.
ಲಸಿಕೆ ಪೂರೈಕೆಯನ್ನು ಐತಿಹಾಸಿಕ ಕ್ಷಣ ಎಂದು ಸೆರಂ ಸಿಇಓ ಆದಾರ್ ಪೂನಾವಾಲಾ ಬಣ್ಣಿಸಿದ್ದಾರೆ. ಮುಂದಿನ ದಿನಗಳಲ್ಲಿ 1000 ರೂಪಾಯಿಗೆ ಓಪನ್ ಮಾರ್ಕೆಟ್ನಲ್ಲಿ ಲಸಿಕೆ ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಸಾಗಾಟ ಹೇಗಾಯ್ತು?
ಪುಣೆಯ ಸೆರಂನಿಂದ 1.1ಕೋಟಿ ಕೋವಿಶೀಲ್ಡ್ ಲಸಿಕೆಗಳನ್ನು 478 ಬಾಕ್ಸ್ಗಳ ಮೂಲಕ ಕೋವಿಶೀಲ್ಡ್ ಲಸಿಕೆ ರವಾನೆ ಮಾಡಲಾಗಿದೆ. ಕೋವಿಶೀಲ್ಡ್ ಲಸಿಕೆಗಳ ಒಂದೊಂದು ಬಾಕ್ಸ್ 32 ಕೆಜಿ ತೂಕವನ್ನು ಹೊಂದಿದ್ದು, ಪ್ರತಿಯೊಂದು ಬಾಕ್ಸ್ನಲ್ಲಿ 5 ಎಂಎಲ್ನ 1200 ಲಸಿಕೆ ಬಾಟಲ್ ಇರಲಿದೆ.
ಫಲಾನುಭವಿಗಳಿಗೆ 0.5 ಎಂಎಲ್ ಡೋಸ್ ಮಾತ್ರ ನೀಡಬೇಕಾಗುತ್ತದೆ. ದೇಶದ ವಿವಿಧೆಡೆಗಳಿಗೆ ಒಟ್ಟು 15.296 ಟನ್ ತೂಕದ ಲಸಿಕೆ ರವಾನೆಯಾಗಿದೆ. ಅಕ್ಟೋಬರ್ 20 ರಂದು ಲಸಿಕೆಗಳನ್ನು ಉತ್ಪಾದನೆ ಮಾಡಲಾಗಿದ್ದು, ಏಪ್ರಿಲ್ 20ರವರೆಗೆ ಬಳಸಬಹುದಾಗಿದೆ.
ಏರ್ ಇಂಡಿಯಾ, ಗೋ ಏರ್, ಸ್ಪೈಸ್ ಜೆಟ್ ವಿಮಾನಗಳ ಮೂಲಕ ದೆಹಲಿ, ಬೆಂಗಳೂರು, ಅಹ್ಮದಾಬಾದ್, ಕೊಲ್ಕೊತಾ, ಚೆನ್ನೈ, ಲಕ್ನೋ, ಕರ್ನಾಲ್, ಪಾಟ್ನಾ, ಹೈದರಾಬಾದ್, ವಿಜಯವಾಡ, ಗುವಾಹಟಿ, ಚಂಡೀಘಡ, ಭುವನೇಶ್ವರಕ್ಕೆ ಲಸಿಕೆ ಸಾಗಣೆ ಮಾಡಲಾಗಿದೆ. ಮುಂಬೈಯಿಂದ ಬೆಳಗಾವಿಗೆ 1.47 ಲಕ್ಷ ಡೋಸ್ ಲಸಿಕೆ ರಸ್ತೆ ಮಾರ್ಗದ ಮೂಲಕ ಬರಲಿದೆ.