ನವದೆಹಲಿ/ಹುಬ್ಬಳ್ಳಿ: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಅವರ ನವದೆಹಲಿಯ ಗೃಹ ಕಚೇರಿ ಮತ್ತು ಹುಬ್ಬಳ್ಳಿ ಕಾರ್ಯಾಲಯದಲ್ಲಿ ಸ್ತ್ರೀ ಸಬಲೀಕರಣದ ಪ್ರತೀಕವಾಗಿ 77ನೇ ಗಣರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಲಾಯಿತು.
ನವದೆಹಲಿಯ (Newdelhi) ಗೃಹ ಕಚೇರಿ ಆವರಣದಲ್ಲಿ ಸಚಿವರು ತಮ್ಮ ಸಹೋದ್ಯೋಗಿಗಳು ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಧ್ವಜಾರೋಹಣ ನೆರವೇರಿಸಿದರು. ಇನ್ನೂ ಹುಬ್ಬಳ್ಳಿ (Hubballi) ಕಾರ್ಯಾಲಯದಲ್ಲಿ ಸ್ತ್ರೀ ಗೌರವದ ಪ್ರತೀಕ ಎನ್ನುವಂತೆ `ಸ್ವಚ್ಛ ವಾಹಿನಿ ಮಹಿಳಾ ಚಾಲಕಿ’ಯಿಂದ ಧ್ವಜಾರೋಹಣ ನೆರವೇರಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ನಾಪತ್ತೆಯಾದ 400 ಕೋಟಿ ಹಣ ಗುಜರಾತಿನ ಪ್ರಭಾವಿ ರಾಜಕಾರಣಿಯದ್ದು?
ಹುಬ್ಬಳ್ಳಿ ಕಾರ್ಯಾಲಯದಲ್ಲಿ ಬೇಲೂರು ಗ್ರಾ.ಪಂ ಸ್ವಚ್ಛ ವಾಹಿನಿ ವಾಹನ ಚಾಲಕಿ 57 ವರ್ಷದ ಕಲ್ಲವ್ವ ಗಾಳಿ ಅವರಿಂದ 77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಅತ್ಯಂತ ಸಡಗರದಿಂದ ಆಚರಿಸಲಾಯಿತು. `ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನಾ ಸಂಸ್ಥೆ’ (KSRLPS) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಸ್ವಚ್ಛ ಭಾರತ್ ಅಭಿಯಾನದಲ್ಲಿ ತೊಡಗಿರುವ ಘಟಕಗಳ ಸ್ವಚ್ಛ ವಾಹಿನಿ ಮಹಿಳಾ ಚಾಲಕಿಯರು ಧ್ವಜಾರೋಹಣ ನೆರವೇರಿಸಿದ್ದು ಸ್ತ್ರೀ ಸಬಲತೆಗೆ ಸಾಕ್ಷಿಯಂತಿತ್ತು.
130 ಸ್ವಚ್ಛ ವಾಹಿನಿ ಚಾಲಕಿಯರಿಗೆ ಸನ್ಮಾನ:
ಇದೇ ವೇಳೆ ಸ್ವಚ್ಛ ವಾಹಿನಿ ವಾಹನಗಳ 130ಕ್ಕೂ ಅಧಿಕ ಚಾಲಕಿಯರನ್ನು ಗೌರವಿಸಿ, ಸನ್ಮಾನಿಸಲಾಯಿತು. “ನಗರ ಮಾತ್ರವಲ್ಲದೆ ಗ್ರಾಮಗಳಲ್ಲಿ ಸಹ ಪರಿಸರ ನೈರ್ಮಲ್ಯ ಕಾಪಾಡುವಲ್ಲಿ ಈ ಮಹಿಳಾ ಪಾತ್ರ ಅನನ್ಯವಾದುದು. ಕಸ ವಿಲೇವಾರಿಯಲ್ಲಿ ಚಾಲಕಿಯರ ಪಾತ್ರ ಅನನ್ಯವಾಗಿದೆ ಎಂದು ಪ್ರಹ್ಲಾದ್ ಜೋಶಿ ಸ್ಮರಿಸಿದರು. ಇಂದಿನ ಆಧುನಿಕ ದಿನಮಾನದಲ್ಲಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಿ, ಗ್ರಾಮೀಣರ ಜನಜೀವನವನ್ನು ಸುಂದರಗೊಳಿಸುತ್ತಿರುವ ಈ ಸ್ವಚ್ಛತಾ ವಾಹನ ಚಾಲಕಿಯರು ಗ್ರಾಮೀಣ ಭಾಗದ ಸ್ವಚ್ಛತಾ ರಾಯಭಾರಿಗಳಾಗಿದ್ದಾರೆ ಎಂದು ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM-ನ್ಯಾಷನಲ್ ರೂರಲ್ ಲೈವ್ಲಿಹುಡ್ ಮಿಷನ್) ಆರಂಭಿಸಿ ಗ್ರಾಮೀಣ ಮಹಿಳೆಯರ ಬದುಕಿಗೊಂದು ದಾರಿ ಕಲ್ಪಿಸಿ, ಮಹಿಳಾ ಸಶಕ್ತೀರಣ ಹಾಗೂ ಸಬಲೀಕರಣಕ್ಕೆ ಒತ್ತು ನೀಡಿದೆ. ಇದಕ್ಕೆ ಈ ಮಹಿಳೆಯರೇ ಸಾಕ್ಷಿಯಾಗಿದ್ದಾರೆ. ಒಂದು ಕುಟುಂಬ ಸುಂದರ, ಸ್ವಚ್ಛ ಮತ್ತು ಆರೋಗ್ಯಕರವಾಗಿರುವಲ್ಲಿ ಮಹಿಳೆಯರದ್ದೇ ಪ್ರಮುಖ ಪಾತ್ರವಿರುತ್ತದೆ. ಪ್ರತಿಯೊಬ್ಬರೂ ಇದನ್ನು ಅರಿತು ಸ್ತ್ರೀ ಗೌರವ ತೋರುವುದು ಅವಶ್ಯವಾಗಿದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ, ಮಾಜಿ ಮೇಯರ್ ವೀಣಾ ಬಾರದ್ವಾಡ್, ಧಾರವಾಡ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರಾಜ್ಯ ಎಸ್ ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಕಲ್ಮೇಶ ಬೇಲೂರ, ಪಾಲಿಕೆ ಸದಸ್ಯರಾದ ಶೀಲಾ ಕಾಟ್ಕರ್, ಮೀನಾಕ್ಷಿ ಒಂಟಮೂರಿ, ರೂಪಾ ಶೆಟ್ಟಿ ಹಾಗೂ ಕಾರ್ಯಾಲಯದ ಸಿಬ್ಬಂದಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗಣರಾಜ್ಯೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಗಿಲ್ಲಿ ಕ್ರೇಜ್ – ವೇದಿಕೆ ಏರಿದ ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ




