ಕೊಯಂಬತ್ತೂರು: ಹತ್ತಾರು ವಿದ್ಯಾರ್ಥಿಗಳಿದ್ದರು ಅದೆಷ್ಟೋ ಶಾಲೆಗಳನ್ನು ಸರ್ಕಾರ ಮುಚ್ಚಿವೆ. ಆದರೆ ತಮಿಳುನಾಡಿದ ವಾಲ್ಪರೈನಲ್ಲಿರುವ ಚಿನ್ನಕಲ್ಲರ್ ನ 76 ವರ್ಷದ ಹಳೆದ ಶಾಲೆವೊಂದನ್ನು ಕೇವಲ ಒಂದೇ ಒಂದು ವಿದ್ಯಾರ್ಥಿಗಾಗಿ ಪುನರಾರಂಭಿಸಲಾಗಿದೆ.
ಹೌದು. ಹತ್ತಾರು ಮಕ್ಕಳಿದ್ದರು ಮುಚ್ಚುವ ಈಗಿನ ಕಾಲದ ಶಾಲೆಗಳ ಮಧ್ಯೆ ಕೇವಲ ಒಂದು ವಿದ್ಯಾರ್ಥಿ ಶಾಲೆಯೊಂದು ಪುನರಾರಂಭವಾಗುವುದು ಎಲ್ಲೆಡೆ ಭಾರಿ ಸುದ್ದಿಯಾಗಿದೆ. 2017-18ರ ಶೈಕ್ಷಣಿಕ ವರ್ಷದಲ್ಲಿ ಒಂದು ಹುಡುಗಿಗೆ ಶಿಕ್ಷಣ ನೀಡಿದ ಬಳಿಕ ಈ ಶಾಲೆಗೆ ಮಕ್ಕಳು ದಾಖಲಾತಿ ಆಗದ ಕಾರಣಕ್ಕೆ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಆದರೆ ಈ ವರ್ಷ ಗ್ರಾಮದ ಟೀ ಎಸ್ಟೇಟ್ನಲ್ಲಿ ಕೆಲಸ ಮಾಡುವ ರಾಜೇಶ್ವರಿ ಅವರು ತನ್ನ ಮಗನನ್ನು ಈ ವರ್ಷ ಶಾಲೆಗೆ ಸೇರಿಸಿದ್ದಾರೆ. ಶಿವ(6) ಓರ್ವನಿಗಾಗಿ ಈ ಶಾಲೆ ಸಿಬ್ಬಂದಿಗಳು ಮತ್ತೆ ಶಾಲೆ ಬಾಗಿಲು ತೆರೆದಿದ್ದಾರೆ.
ಮನೆಯಿಂದ ನಾಲ್ಕು ಕಿ.ಮೀ ದೂರವಿರುವ ಪರಿಯಕಲ್ಲರ್ ಶಾಲೆಗೆ ಮಗನನ್ನು ಕಳುಹಿಸಲು ಕಷ್ಟವಾಗುತ್ತದೆ ಎಂದು ಮಹಿಳೆ ತಮ್ಮ ಮನೆಗೆ ಹತ್ತಿರವಿರುವ ಚಿನ್ನಕಲ್ಲರ್ ಶಾಲೆಯನ್ನು ಮತ್ತೆ ತನ್ನ ಮಗನಿಗಾಗಿ ತೆರೆಯುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ತಾಯಿಯ ಮನವಿಗೆ ಮಣಿದ ಶಿಕ್ಷಣ ಅಧಿಕಾರಿಗಳು, ಓರ್ವ ವಿದ್ಯಾರ್ಥಿಗಾಗಿ ಶಾಲೆಯನ್ನು ಮತ್ತೆ ಆರಂಭಿಸಿದ್ದಾರೆ.
ಸದ್ಯ ಸೋಮವಾರದಂದು ಶಿವ 1ನೇ ತರಗತಿಗೆ ದಾಖಲಾತಿ ಪಡೆದಿದ್ದಾನೆ. ಮಗುವಿಗೆ ಅಗತ್ಯ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಈ ಹಿಂದೆ ಇಲಾಖೆ ಶಾಲೆಯನ್ನು ಪುನರಾರಂಭಿಸಲು ವಿಶೇಷ ಪ್ರಯತ್ನಗಳನ್ನೂ ಮಾಡಿತ್ತು. ಆದರೆ ಶೂನ್ಯ ದಾಖಲಾತಿಯ ಕಾರಣ ಕಳೆದ ವರ್ಷ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಸಿಬ್ಬಂದಿಯನ್ನು ಬೇರೊಂದು ಶಾಲೆಗೆ ವರ್ಗಾವಣೆ ಮಾಡಲಾಗಿತ್ತು ಎಂದು ಪೆರಿಯಕಲ್ಲರ್ ಶಾಲೆ ಮುಖ್ಯ ಶಿಕ್ಷಕ ಶಕ್ತಿವೇಲ್ ಹೇಳಿದ್ದಾರೆ.
1943ರಲ್ಲಿ ಎಸ್ಟೇಟ್ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹಾಗೂ ಸ್ಥಳೀಯ ಮಕ್ಕಳಿಗೆ ಶಿಕ್ಷಣ ನೀಡಲು ಈ ಶಾಲೆ ಆರಂಭಿಸಲಾಗಿತ್ತು. ಆಗ ಈ ಸ್ಥಳದಲ್ಲಿ 300ಕ್ಕೂ ಅಧಿಕ ಕಾರ್ಮಿಕರ ಕುಟುಂಬಗಳು ವಾಸವಾಗಿದ್ದವು. ಆದ್ದರಿಂದ 70 ವರ್ಷಗಳ ಕಾಲ ಶಾಲೆ ಸರಿಯಾಗಿ ನಡೆದಿತ್ತು. ಅಲ್ಲದೆ ಪ್ರತಿ ವರ್ಷ 50ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದರು. ಆದರೆ ಕೆಲ ವರ್ಷಗಳಿಂದ ಕೂಲಿ ಕಾರ್ಮಿಕರು ವಲಸೆ ಹೋಗಲು ಆರಂಭಿಸಿದ ಬಳಿಕ ಶಾಲೆ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ದಟ್ಟ ಅರಣ್ಯದಿಂದ ಕೂಡಿರುವ ಚಿನ್ನಕಲ್ಲರ್ ಪ್ರದೇಶದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. 2017-18ರಲ್ಲಿ ದಾಖಲಾಗಿದ್ದ ಓರ್ವ ವಿದ್ಯಾರ್ಥಿನಿಗಾಗಿ ಅಧ್ಯಾಪಕ ಹಾಗೂ ಮುಖ್ಯ ಶಿಕ್ಷಕರನ್ನು ನೇಮಿಸಲಾಗಿತ್ತು. ಆ ಬಳಿಕ ಶಾಲೆಯ ಸುತ್ತಾಮುತ್ತಾ ಆನೆಗಳ ಹಾವಳಿ ಹೆಚ್ಚಾಗುತ್ತಿದಂತೆ ಮಕ್ಕಳು ಶಾಲೆಯತ್ತ ಬರಲು ಹೆದರಿದರು. ಶಾಲೆಯ ಗಾಜು, ಬಾಗಿಲುಗಳೂ ಆನೆ ದಾಳಿಗೆ ಹಾನಿಯಾಗಿದ್ದವು. ಅಲ್ಲದೆ ಪ್ರದೇಶದಲ್ಲಿ ಆನೆ ಸೇರಿ ಇನ್ನಿತರ ಪ್ರಾಣಿಗಳು ಇಲ್ಲಿ ವಾಸವಾಗಿದ್ದ ಜನರ ಮೇಲೆ ದಾಳಿ ಮಾಡುವ ಪ್ರಕರಣ ಹೆಚ್ಚಾಗುತ್ತಿದ್ದಂತೆ ಜನರು ಇಲ್ಲಿಂದ ವಲಸೆ ಹೋಗಲು ಶುರುಮಾಡಿದರು. ಹೀಗಾಗಿ ಸದ್ಯ ಈ ಪ್ರದೇಶದಲ್ಲಿ ಕೇವಲ 15 ಕುಟುಂಬಗಳು ಮಾತ್ರ ವಾಸವಾಗಿದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟರು.
ಬಳಿಕ ಮಾತನಾಡುತ್ತ, ಇತ್ತೀಚಿಗೆ ಇಲ್ಲಿ ಆನೆ ದಾಳಿ ನಡೆಸಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. ಆದರೆ ಗ್ರಾಮಸ್ಥರಲ್ಲಿ ಇನ್ನೂ ಕಾಡು ಪ್ರಾಣಿಗಳ ಭಯ ಇದೆ. ಅಲ್ಲದೆ ಶಿವನನ್ನು ಪೆರಿಯಕಲ್ಲರ್ ಶಾಲೆಗೆ ಕಳಿಸುವ ಬಗ್ಗೆ ತಾಯಿಯ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ. ಒಂದು ವೇಳೆ ಅವರು ಒಪ್ಪಿದರೆ ಈ ಶಾಲೆ ಮತ್ತೆ ಮುಚ್ಚಲಿದೆ ಎಂದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]