ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಪುನರ್ವಸತಿ ಕೇಂದ್ರದಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬಗಳಿಗೆ ವಿದ್ಯುತ್ ಬರೆ ಅಚ್ಚರಿ ಮೂಡಿಸಿದೆ.
ದಿಡ್ಡಳ್ಳಿ ನಿರಾಶ್ರಿತ ಕುಟುಂಬಗಳಿಗೆ ಸರ್ಕಾರ ಬಸವನಹಳ್ಳಿ ಹಾಗೂ ಬ್ಯಾಡಗೊಟ್ಟ ಗ್ರಾಮದಲ್ಲಿ ಮನೆಗಳನ್ನು ನಿರ್ಮಿಸಿ ವಸತಿ ಸೌಲಭ್ಯ ಕಲ್ಪಿಸಿದ್ದಾರೆ. ತಮ್ಮ ಕುಟುಂಬ ನಿರ್ವಹಣೆಗಾಗಿ ನಿತ್ಯ ಕೂಲಿಗಾಗಿ ಪರಿತಪಿಸುತ್ತಿರುವ ಇಂತಹ ಕುಟುಂಬಗಳಿಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮ ನೀಡಿರುವ ವಿದ್ಯುತ್ ಬಿಲ್ಗೆ ಜನರು ಅಚ್ಚರಿ ಆಗಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿರುವ ಮನೆಗಳಿಗೆ ಕನಿಷ್ಠ ಮೂರರಿಂದ ನಾಲ್ಕು ವಿದ್ಯುತ್ ಲೈಟ್ ಪಾಯಿಂಟ್ ಇರಬಹುದು. ಅಲ್ಲದೆ ಈ ಮನೆಗಳಿಗೆ ಸರ್ಕಾರದ ವತಿಯಿಂದಲೇ ಎಲ್ಇಡಿ ಬಲ್ಪ್ ಗಳನ್ನು ನೀಡಲಾಗಿದೆ. ಇಲ್ಲಿನ ಮನೆಗಳಲ್ಲಿ ವಾಷಿಂಗ್ ಮಿಷನ್, ಫ್ರಿಜ್, ಮಿಕ್ಸಿಗಳಿಲ್ಲ. ಪ್ರತಿ ಕುಟುಂಬ ತಿಂಗಳ ಪೂರ್ತಿ ವಿದ್ಯುತ್ ಬಳಸಿದರೆ ಕನಿಷ್ಠ 400 ರೂ.ಯಿಂದ 500 ರೂ. ಬಿಲ್ ಬರಬಹುದು. ಆದರೆ ಇಲ್ಲಿನ ಮನೆಯೊಂದಕ್ಕೆ ಚೆಸ್ಕಾಂ ವತಿಯಿಂದ ನೀಡಿರುವ ಬಿಲ್ ರೂ. 7561 ಜೊತೆಗೆ ಇತರೆ ಮನೆಗಳಿಗೆ ಸಾವಿರಾರೂ ರೂಗಳ ವಿದ್ಯುತ್ ಶುಲ್ಕ ನೀಡಿದ್ದಾರೆ.
ಅಲ್ಲದೆ ಬಿಲ್ ಪೂರ್ಣವಾಗಿ ಪಾವತಿಸದೆ ಹೋದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಚೆಸ್ಕಾಂ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಬಿಲ್ ನೋಡಿ ಶಾಕ್ ಆಗಿರುವ ಇಲ್ಲಿನ ಜನರು ಚೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಮನೆಯಲ್ಲಿ ಹೆಚ್ಚು ವಿದ್ಯುತ್ ಬಳಸದೆ ಹೋದರೂ ಕೂಡ ಇಷ್ಟೊಂದು ಬಿಲ್ ಹೇಗೆ ಬಂತು ಎಂದು ಪ್ರಶ್ನಿಸಿರುವ ಹಾಡಿ ಮುಖಂಡ ಅಪ್ಪು ಹಾಗೂ ಮಲ್ಲಪ್ಪ ಈ ಕೂಡಲೇ ಚೆಸ್ಕಾಂ ನೀಡಿರುವ ಬಿಲ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.