ಮುಂಬೈ: ಲಿಫ್ಟ್ ನಿಂದ ಹೊರಬರುತ್ತಿದ್ದ ವೇಳೆ ಲಿಫ್ಟ್ ಹಾಗೂ ನೆಲದ ನಡುವಿದ್ದ ಅಂತರದಲ್ಲಿ ಬಾಲಕನೊಬ್ಬನ ಕಾಲು ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ಶನಿವಾರದಂದು ನಡೆದಿದೆ.
ಅಂಶ್ ಕುಮಾರ್(7) ಸಾವನ್ನಪ್ಪಿರುವ ಬಾಲಕ. ಪಲ್ಘಾರ್ ಜಿಲ್ಲೆಯ ವಾಸಿ ತೆಹಸಿಲ್ನ ಸತಿವಾಲಿ ಎಂಬ ಪ್ರದೇಶದಲ್ಲಿ ತನ್ನ ಪೋಷಕರ ಜೊತೆ ಬಾಲಕ ವಾಸಿಸುತ್ತಿದ್ದನು. ಶನಿವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಅಂಶ್ ಹಾಗೂ ಆತನ ಸ್ನೇಹಿತರು ತಾವು ವಾಸಿಸುತ್ತಿದ್ದ ಕಟ್ಟಡದ ಲಿಫ್ಟ್ ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.
ಆಟವಾಡುತ್ತ ಬಾಲಕ ಹಾಗೂ ಆತನ ಸ್ನೇಹಿತರು ಲಿಫ್ಟ್ ನಲ್ಲಿ ಮೊದಲ ಮಹಡಿಗೆ ಬಂದಿದ್ದಾರೆ. ಆಗ ಲಿಫ್ಟ್ ನಿಂದ ಹೊರಗಡೆ ಬರುವಾಗ ನೆಲ ಹಾಗೂ ಲಿಫ್ಟ್ ನಡುವಿನ ಅಂತರದಲ್ಲಿ ಬಾಲಕನ ಕಾಲು ಸಿಲುಕಿಕೊಂಡಿದೆ. ಈ ವೇಳೆ ಬಾಲಕನಿಗೆ ಅಲ್ಲಿಂದ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟರಲ್ಲಿ ಲಿಫ್ಟ್ ಸ್ಟಾರ್ಟ್ ಆದ ಪರಿಣಾಮ ಬಾಲಕನ ತಲೆ ಲಿಫ್ಟ್ ಹಾಗೂ ಶಾಫ್ಟ್ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv