ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಇಂದು) ಮಧ್ಯಾಹ್ನ ಮಹಾ ದರೋಡೆ ನಡೆದಿದೆ. ಎಟಿಎಂಗೆ ಹಣ ಸಾಗಿಸುವ ವಾಹನವನ್ನು ರಸ್ತೆ ಮಧ್ಯೆದಲ್ಲೇ ಅಡ್ಡಗಟ್ಟಿದ ದರೋಡೆಕೋರರು ಕೋಟ್ಯಂತರ ರೂಪಾಯಿ ದರೋಡೆ ಮಾಡಿದೆ.
ಬೆಂಗಳೂರಿನ ಜಯದೇವ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ (ಅಶೋಕ ಪಿಲ್ಲರ್ ಬಳಿ) ಈ ಘಟನೆ ನಡೆದಿದೆ. ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಸೌತ್ ಎಂಡ್ ಸರ್ಕಲ್ ಬಳಿಯ ಎಟಿಎಂಗೆ ಹಣ ಹಾಕಲೆಂದು GJ 01 HT 9173 ಸಂಖ್ಯೆ ವಾಹನ ಹಣ ತುಂಬಿಕೊಂಡು ತೆರಳುತ್ತಿತ್ತು. ಈ ವೇಳೆ ಜಯದೇವ ಡೈರಿ ಸರ್ಕಲ್ನಲ್ಲಿ ಇನ್ನೋವಾದಲ್ಲಿ ಬಂದ 6-7 ಜನರ ಗ್ಯಾಂಗ್, ಎಟಿಎಂ ವಾಹನ ತಡೆದು ನಾವು ಆರ್ಬಿಐನವರು ಎಂದು ಹೇಳಿ ಹೆದರಿಸಿದ್ದಾರೆ. ಗನ್ಮ್ಯಾನ್ ಸೇರಿದಂತೆ ಉಳಿದವರನ್ನೆಲ್ಲ ಅಲ್ಲೇ ಇಳಿಸಿ ವಾಹನ ಸಮೇತ ಚಾಲಕನನ್ನ ಡೈರಿ ಸರ್ಕಲ್ಗೆ ಕರೆದೊಯ್ದಿದ್ದಾರೆ. ಬಳಿಕ ಡೇರಿ ಸರ್ಕಲ್ ಫ್ಲೈಓವರ್ ಮೇಲೆ ನಿಲ್ಲಿಸಿ ವಾಹನದಲ್ಲಿದ್ದ ಹಣವನ್ನು ಇನ್ನೋವಾ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಎಟಿಎಂ ವಾಹನದಲ್ಲಿ ಒಟ್ಟು 4 ಜನ ಸಿಎಂಎಸ್ ಸಿಬ್ಬಂದಿ ಇದ್ದರು. ಓರ್ವ ಡ್ರೈವರ್, ಇಬ್ಬರು ಗನ್ ಮ್ಯಾನ್ ಹಾಗೂ ಮತ್ತೊಬ್ಬ ಹಣ ಹಾಕುವ ಸಿಬ್ಬಂದಿ ಇದ್ದು, ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಇವರ ವಿಚಾರಣೆ ನಡೆಯುತ್ತಿದೆ.
ಹಲವು ದಿನಗಳಿಂದಲೇ ಸಂಚು
ಹಲವು ದಿನಗಳಿಂದಲೇ ಸಂಚು ರೂಪಿಸಿದ್ದ ದರೋಡೆಕೋರರ ಗ್ಯಾಂಗ್ ಬುಧವಾರ ಬೆಳಗ್ಗೆ ಎಟಿಎಂಗಳಿಗೆ ಹಣ ಸಾಗಿಸುವ ವ್ಯಾನ್ ಹಿಂಬಾಲಿಸಿದೆ. ಆ ಬಳಿಕ ವಾಹನವನ್ನ ಅಡ್ಡಗಟ್ಟಿ ಸಿಬ್ಬಂದಿಯನ್ನ ಬೆದರಿಸಿ ವಾಹನದ ಹಿಂಬದಿಯ ಡೋರ್ ತೆರೆದು ಎಟಿಎಂಗಳಿಗೆ ತುಂಬಲು ಇದ್ದ ಕೋಟ್ಯಂತರ ರೂಪಾಯಿ ಹಣ ತುಂಬಿಕೊಂಡು ಇನ್ನೋವಾ ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಲಾಗುತ್ತಿದ್ದು, ಮೇಲ್ನೋಟಕ್ಕೆ ಸಿಎಂಎಸ್, ಚಾಲಕ, ಸಿಬ್ಬಂದಿ ಮೇಲೆ ಅನುಮಾನ ಮೂಡಿದೆ. ಈ ಹಿನ್ನೆಲೆ ಪೊಲೀಸರು ಚಾಲಕನ ಪೂರ್ವಾಪರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಸಿದ್ಧಾಪುರ ಹಾಗೂ ಆಡುಗೋಡಿ ಪೊಲೀಸರಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯೂ ನಡೆಸಲಾಗುತ್ತಿದೆ.

