ಹಾಸನ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದ ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ (Hassan) ಕರುವೊಂದನ್ನು (Cow) ಕದ್ದು ಬಾಡೂಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಆಲೂರು ತಾಲೂಕಿನ ಹೆದ್ದುರ್ಗ ಗ್ರಾಮದ ಹೂವಣ್ಣ ಎಂಬುವವರಿಗೆ ಸೇರಿದ್ದ ಕರುವನ್ನು ದುಷ್ಕರ್ಮಿಗಳು ಹೊತ್ತೊಯ್ದು, ಕಡಿದು ಮಾಂಸದೂಟ ಮಾಡಿದ್ದಾರೆ. ಮಂಗಳವಾರ ಕರುವನ್ನು ದುಷ್ಕರ್ಮಿಗಳು ಕದ್ದಿದ್ದರು. ಕರುವಿಗಾಗಿ ಹುಡುಕಾಟ ನಡೆಸಿದಾಗ, ಮಡಬಲು ಗ್ರಾಮದ ರೈಲ್ವೆ ಗೇಟ್ ಸಮೀಪ ಕರುವಿನ ರುಂಡ ಪತ್ತೆಯಾಗಿತ್ತು.
ಈ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಅದೇ ಗ್ರಾಮದ ಅಜ್ಗರ್, ಕೌಶಿಕ್, ಮೋಹನ್, ಮನೋಜ್, ಚಂದನ್, ಪವನ್ ಮತ್ತು ಅಜಿತ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಸಾಕ್ಷ್ಯ ನಾಶಕ್ಕಾಗಿ ರುಂಡ, ಕರುಳು ಹಾಗೂ ಚರ್ಮವನ್ನು ನದಿಗೆ ಎಸೆಯಲು ಪ್ರಯತ್ನಿಸಿದ್ದರು. ಅಷ್ಟರಲ್ಲಾಗಲೇ ಬೆಳಗಾಗಿದ್ದು ಜಮೀನು ಕೆಲಸಕ್ಕೆ ರೈತರು ಬರುತ್ತಿರುವುದನ್ನು ಕಂಡು ರುಂಡವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.