– ಹೊಡೆತದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿ
– ತಾಯಿ ಜೊತೆ ವಾಸವಾಗಿದ್ದ ಮಕ್ಕಳು
ತಿರುವನಂತಪುರಂ: ಏಳು ವರ್ಷದ ತನ್ನ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ತಂದೆಯನ್ನು ರಾಜೇಶ್(41) ಎಂದು ಗುರುತಿಸಲಾಗಿದೆ. ಈತ ಚಿರಾಯಿಂಕಿಜು ನಿವಾಸಿ. ರಾಜೇಶ್ ಹಾಗೂ ಪತ್ನಿ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪ ಇದ್ದು, ಮಾತುಕತೆ ಇರಲಿಲ್ಲ. ಮಕ್ಕಳು ಕೂಡ ತಾಯಿ ಜೊತೆ ಬೇರೆಯಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಒಂದು ದಿನ ರಾಜೇಶ್ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಮನೆಗೆ ಕರೆದುಕೊಂಡು ಬಂದ ಬಳಿಕ ರಾಜೇಶ್ ಕಂಠಪೂರ್ತಿ ಕುಡಿದು ಬಂದು ಮಗಳಿಗೆ ಪ್ರತಿದಿನ ಹೊಡೆಯುತ್ತಿದ್ದನು. ಘಟನೆ ನಡೆದ ದಿನ ರಾಜೇಶ್ ಕುಡಿದು ಬಂದು ಮಗಳಿಗೆ ಚಪ್ಪಲಿಯಲ್ಲಿ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಇತ್ತ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಲೈನ್ ಹಾಗೂ ಕಡಕ್ಕವೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಬೇರೆ ಮನೆಯಲ್ಲಿ ವಾಸವಾಗಿರುವ ರಾಜೇಶ್ ಪತ್ನಿಯನ್ನು ಠಾಣೆಗೆ ಕರೆದು ಮಕ್ಕಳನ್ನು ಅವರಿಗೆ ಒಪ್ಪಿಸಿದ್ದಾರೆ.