ಬೆಂಗಳೂರು: ಈ ಸಲ ಕಪ್ ನಮ್ದೇ ಎಂದು ಬೆಂಗಳೂರು ಬುಲ್ಸ್ ತಂಡ ವಿವೋ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರ ಪವನ್ ಸೆಹ್ರಾವತ್ ಇಂದು ಬೆಂಗಳೂರಿನಲ್ಲಿ ಕಬಡ್ಡಿ ಆಡಿದರು. ತಮ್ಮ ನೆಚ್ಚಿನ ಆಟಗಾರ ಹಾಗೂ ಬೆಂಗಳೂರು ಬುಲ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ ಗೆಲುವಿನಲ್ಲಿ 22 ಅಂಕ ಗಳಿಸಿ ನಿರ್ಣಾಯಕ ಪಾತ್ರ ವಹಿಸಿದ್ದ ಪವನ್ ಸೆಹ್ರಾವತ್ ನೋಡಿದ ಅಭಿಮಾನಿಗಳು ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
68ನೇ ಅಖಿಲ ಭಾರತ ಅಂತರ್ ರೈಲ್ವೇ ಕಬಡ್ಡಿ ಪಂದ್ಯಾವಳಿಗೆ ಇಂದು ಬೆಂಗಳೂರಿನಲ್ಲಿ ಚಾಲನೆ ದೊರೆಯಿತು. ಈ ಪಂದ್ಯಾವಳಿಯಲ್ಲಿ ರವೀಂದ್ರ ಪಹಲ್, ವಿಠಲ್ ಮೇಟಿ ಸೇರಿದಂತೆ ಪ್ರಮುಖ ಆಟಗಾರರು ಭಾಗವಹಿಸಿದ್ದರು. ನಗರದ ಯಲಹಂಕ ರೈಲು ಗಾಲಿ ಕಾರ್ಖಾನೆ ಸ್ಟೇಡಿಯಂನಲ್ಲಿ 16 ರೈಲ್ವೇ ವಲಯಗಳ 16 ತಂಡಗಳು ಭಾಗವಹಿಸಿದ್ದವು. ಒಟ್ಟು 300 ಜನ ಆಟಗಾರರು ಪಾಲ್ಗೊಂಡಿರೋ ಈ ಕ್ರೀಡಾಕೂಟಕ್ಕೆ ರೈಲು ಗಾಲಿ ಕಾರ್ಖಾನೆಯ ಮುಖ್ಯ ಕಾರ್ಯದರ್ಶಿ ಮರಗುಬ್ ಹುಸೇನ್ ಚಾಲನೆ ನೀಡಿದ್ರು. ಇನ್ನೂ ಎರಡೂ ದಿನ ಈ ಕ್ರೀಡಾಕೂಟವಿದ್ದು, ಫೈನಲ್ ಮ್ಯಾಚ್ 10ರಂದು ನಡೆಯಲಿದೆ.
ಇದೇ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪವನ್ ಸೆಹ್ರಾವತ್, ನಾನು ಕಳೆದ 4 ವರ್ಷಗಳಿಂದ ಈ ಪಂದ್ಯಾವಳಿಯಲ್ಲಿ ಆಟವಾಡುತ್ತಿದ್ದೇನೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುತ್ತಿರುವ ಈ ಪಂದ್ಯಾವಳಿ ಉತ್ತಮ ಪಂದ್ಯಾವಳಿ. ಇಲ್ಲಿ ಮೊದಲು ಆಟವಾಡಿದ ಬಳಿಕ ನಾನು ಪ್ರೊ ಕಬಡ್ಡಿಗೆ ಆಯ್ಕೆಯಾದೆ. ನನಗೆ ಇದೊಂದು ಉತ್ತಮ ಅನುಭವ. ಈ ಪಂದ್ಯಾವಳಿಯಲ್ಲಿ ಯಾರು ಚೆನ್ನಾಗಿ ಆಟವಾಡುತ್ತಾರೋ ಅವರು ಪ್ರೊ -ಕಬಡ್ಡಿಯಲ್ಲಿ ಆಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv