ಅಜ್ಜಿ ಎಂದಿದ್ದಕ್ಕೆ ಬೈದ ವೃದ್ಧೆ- ಸಿಟ್ಟಿಗೆದ್ದು ಕತ್ತು ಹಿಸುಕಿ ಕೊಂದ ಮನೆ ಮಾಲೀಕ

Public TV
2 Min Read
old lady hand

ಚೆನ್ನೈ: ಮನೆ ಮಾಲೀಕನೊಬ್ಬನು ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವೃದ್ಧೆಯೊಬ್ಬರಿಗೆ ಅಜ್ಜಿ ಎಂದು ಕರೆದಿದ್ದಕ್ಕೆ ಅವರು ಬೈದಿದ್ದರು. ತನ್ನ ಮನೆಯಲ್ಲಿದ್ದುಕೊಂಡು ತನಗೇ ಬೈದರಲ್ಲ ಎಂಬ ಸಿಟ್ಟಿಗೆ ಕತ್ತು ಹಿಸುಕಿ ವೃದ್ಧೆಯನ್ನು ಮನೆ ಮಾಲೀಕ ಕೊಲೆ ಮಾಡಿದ್ದಾನೆ.

ಸೆಪ್ಟೆಂಬರ್ 14ರಂದು ಈ ಘಟನೆ ನಡೆದಿದ್ದು, ಆರೋಪಿ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಚೆನ್ನೈನ ಕೊಡುಂಗೈಯ್ಯೂರ್ ನ ನಿವಾಸಿಯಾಗಿದ್ದ ವಿಮಲಾ ಗೋವಿಂದರಾಜ್(68) ಮೃತ ದುರ್ದೈವಿ. ಮನೆ ಮಾಲೀಕ ಸುಧಾಕರ್(35) ಕೊಲೆ ಮಾಡಿದ ಆರೋಪಿ. ಮಹಾನಗರ ಸಾರಿಗೆ ನಿಗಮದಲ್ಲಿ(ಎಂಟಿಸಿ) ತಪಾಸಣಾಧಿಕಾರಿಯಾಗಿದ್ದ ವೃದ್ಧೆಯ ಪತಿ ಗೋವಿಂದರಾಜು ಅವರು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಸುಧಾಕರ್ ಮನೆಯಲ್ಲಿ ಕೆಲ ವರ್ಷದಿಂದ ವೃದ್ಧೆಯೊಬ್ಬರೆ ಬಾಡಿಗೆಗೆ ಇದ್ದರು. ವೃದ್ಧೆಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದು, ಎಲ್ಲರೂ ಮದುವೆಯಾಗಿ ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ:ಡೇಟಿಂಗ್ ಆ್ಯಪ್ ಮೂಲಕ ಗೆಳೆಯನ ಹುಡುಕಾಟದಲ್ಲಿದ್ದಾರೆ 83ರ ವೃದ್ಧೆ

Police Jeep

ಸೆ. 14ರಂದು ವೃದ್ಧೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ವೃದ್ಧೆ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಅದರಿಂದಲೇ ಏಕಾಏಕಿ ವೃದ್ಧೆ ಸಾವನ್ನಪ್ಪಿರಬಹುದು ಎಂದು ಕುಟುಂಬಸ್ಥರು ಉಹಿಸಿದ್ದರು. ಆದ್ದರಿಂದ ಪೊಲೀಸರು ಪ್ರಕರಣವನ್ನು ಅಷ್ಟೇನು ಗಂಭಿರವಾಗಿ ತೆಗೆದುಕೊಂಡಿರಲಿಲ್ಲ.

ಆದರೆ ಮರುದಿನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬುದು ಬೆಳಕಿಗೆ ಬಂತು. ಆಗ ಈ ಬಗ್ಗೆ ತನಿಖೆ ನಡೆಸಲು ಪೊಲೀಸರ ವಿಶೇಷ ತಂಡವನ್ನು ನೇಮಿಸಲಾಯಿತು. ಈ ಸಂಬಂಧ ಪೊಲೀಸರು ವೃದ್ಧೆಯ ಕುಟುಂಬಸ್ಥರು, ನೆರೆಹೊರೆಯ ಮನೆಯವರು ಹಾಗೂ ಆರೋಪಿಯನ್ನು ವಿಚಾರಣೆ ನಡೆಸಿದ ಬಳಿಕ ಸತ್ಯಾಂಶ ಹೊರಬಿದ್ದಿದೆ.

arrest

ವೃದ್ಧೆ ತನ್ನ ಸೌಂದರ್ಯದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಹೀಗಾಗಿ ಅವರು ತುಸು ಜೋರಾಗಿಯೇ ಶೃಂಗಾರ, ಅಲಂಕಾರವನ್ನು ಮಾಡಿಕೊಳ್ಳುತ್ತಿದ್ದರು. ವೃದ್ಧೆ ಕೊಲೆಯಾಗುವ ಕೆಲ ದಿನಗಳ ಹಿಂದೆ ಶೃಂಗಾರ ಮಾಡಿಕೊಂಡು ಮನೆ ಬಳಿ ಹೋಗುತ್ತಿದ್ದ ವೇಳೆ ಮನೆ ಮಾಲೀಕ ವೃದ್ಧೆಯನ್ನು ಅಜ್ಜಿ ಎಂದು ಕರೆದಿದ್ದನು. ಅದಕ್ಕೆ ಕೋಪಗೊಂಡ ವೃದ್ಧೆ ಆತನಿಗೆ ಬಾಯಿಗೆ ಬಂದ ಹಾಗೆ ಬೈದಿದ್ದರು ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದರು.

ಇದೇ ಮಾಹಿತಿಯನ್ನು ಇಟ್ಟುಕೊಂಡು ಪೊಲೀಸರು ಸುಧಾಕರ್ ನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾನೆ. ವೃದ್ಧೆ ಬೈದಿದ್ದನ್ನು ಮನಸ್ಸಲ್ಲಿಟ್ಟುಕೊಂಡು ವಿಷಕಾರುತ್ತಿದ್ದ ಸುಧಾಕರ್ ಸೆ. 14ರಂದು ಕುಡಿದ ಮತ್ತಿನಲ್ಲಿ ಈ ಕೃತ್ಯ ವೆಸೆಗಿದ್ದಾನೆ. ವೃದ್ಧೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *