ಬೆಂಗಳೂರು: ಬೈಯ್ಯಪ್ಪನಹಳ್ಳಿಯಲ್ಲಿದ್ದ (Baiyyappanahalli) ಸರಕಾರಿ ಸ್ವಾಮ್ಯದ ನ್ಯೂ ಗವರ್ನಮೆಂಟ್ ಎಲೆಕ್ಟ್ರಿಕಲ್ ಫ್ಯಾಕ್ಟರಿಗೆ (NGEF) ಸೇರಿದ 119 ಎಕರೆ ಜಾಗದ ಪೈಕಿ 65 ಎಕರೆ ಜಾಗದಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಲಾಗುವುದು. ಮಾರ್ಚ್ ತಿಂಗಳಲ್ಲಿ ಮೊದಲ ಹಂತವನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ (MB Patil) ತಿಳಿಸಿದ್ದಾರೆ.
ಎಂಬಿ ಪಾಟೀಲ್ ಶನಿವಾರ ಎನ್ಜಿಎಫ್ ಆವರಣಕ್ಕೆ ಭೇಟಿ ನೀಡಿ ವೃಕ್ಷೋದ್ಯಾನ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಜೊತೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವೃಕ್ಷೋದ್ಯಾನವನ್ನು ಹಂತ 1, 1ಎ, 1ಬಿ ಮತ್ತು 2 ಹೀಗೆ ನಾಲ್ಕು ಹಂತಗಳಲ್ಲಿ 37.75 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. 1ಎ ಹಂತದ ಕಾಮಗಾರಿ ಕೂಡ ಮುಂದಿನ 6 ತಿಂಗಳಲ್ಲಿ ಮುಗಿಯಲಿದೆ. ಒಟ್ಟಾರೆ ಈ ಜಾಗದಲ್ಲಿ ಈಗಾಗಲೇ 8,500 ಬಗೆಬಗೆಯ ಮರಗಳಿವೆ. ಇವುಗಳ ವೈಜ್ಞಾನಿಕ ಹೆಸರನ್ನು ಈಗ ಪ್ರದರ್ಶಿಸಲಾಗಿದೆ. ಇವುಗಳ ಪೈಕಿ ಒಂದೇ ಒಂದು ಮರವನ್ನೂ ನಾವು ಕಡಿಯುವುದಿಲ್ಲ. ಆದರೆ ಇಲ್ಲಿರುವ ನೀಲಗಿರಿ ಜಾತಿಯ ಮರಗಳನ್ನು ಏನು ಮಾಡಬೇಕೆಂದು ವೈಜ್ಞಾನಿಕವಾಗಿ ಪರಿಶೀಲಿಸಿ ತೀರ್ಮಾನಿಸಲಾಗುವುದು. ಹಂತ-1ರ ಕಾಮಗಾರಿಗಳಿಗೆ ಅಗತ್ಯವಿದ್ದ 11.50 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದರು.
ಎನ್ಜಿಇಎಫ್ ಆವರಣದಲ್ಲಿರುವ ಆಡಳಿತ ಕಚೇರಿ ಕಟ್ಟಡಗಳು, ಕೈಗಾರಿಕಾ ಶೆಡ್ ಗಳು ಕೂಡ ಸುಭದ್ರವಾಗಿವೆ. ಇವೆಲ್ಲವೂ ಗಟ್ಟಿಮುಟ್ಟಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪರೀಕ್ಷಿಸಿ ಹೇಳಿದ್ದಾರೆ. ಆದ್ದರಿಂದ ಈ ಕಟ್ಟಡಗಳಿಗೇ ಹೊಸ ರೂಪ ಕೊಟ್ಟು ಅಗತ್ಯಗಳನ್ನು ಪೂರೈಸಿಕೊಳ್ಳಲಾಗುವುದು. ಕಾಂಪೌಂಡಿನ ಹೊರಗೂ ಕಾರ್ಖಾನೆಗೆ ಸೇರಿದ 4.5 ಎಕರೆ ಜಾಗವಿದೆ. ಅಲ್ಲಿ 5 ರಿಂದ 7 ಸಾವಿರ ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು ಎಂದರು.
ಈಗಾಗಲೇ ಇರುವ ಎರಡು ಎಲೆಕ್ಟ್ರಿಕ್ ಮೋಟಾರ್ ಶೆಡ್ಗಳಲ್ಲಿ ಕನಿಷ್ಠ 15 ಸಾವಿರ ಆಸನ ವ್ಯವಸ್ಥೆ ಇರುವ ಎರಡು ಪ್ರತ್ಯೇಕ ಕನ್ವೆನ್ಶನ್ ಸೆಂಟರ್ ನಿರ್ಮಿಸಲಾಗುವುದು. ಇಲ್ಲಿ ಸಮಾವೇಶ, ಸಮಾರಂಭ, ವಾರ್ಷಿಕೋತ್ಸವ, ಸಮ್ಮೇಳನ, ವಿಚಾರ ಸಂಕಿರಣ, ಕಾರ್ಯಕ್ರಮ ಇತ್ಯಾದಿಗಳನ್ನು ಮಾಡಬಹುದು. ಇದರ ಜೊತೆಗೆ `ಇನ್ನೋವರ್ಸ್’ ಹೆಸರಿನಲ್ಲಿ ನವೋದ್ಯಮಗಳಿಗೆ ಬೇಕಾದ ಪರಿಪೋಷಣಾ ಕೇಂದ್ರವನ್ನು ಸರ್ಕಾರದ `ಕಿಟ್ಸ್’ ಸಂಸ್ಥೆಯ ವತಿಯಿಂದ ಸ್ಥಾಪಿಸಲಾಗುವುದು. ಇಲ್ಲಿ ನವೋದ್ಯಮ ವಲಯದವರು ಬಂದು ಕೆಲಸವನ್ನೂ ಮಾಡಬಹುದು. ಜೊತೆಗೆ ಐಟಿ-ಬಿಟಿ ಇಲಾಖೆಯು ಇಲ್ಲಿ 100 ಕೋಟಿ ರೂ. ವೆಚ್ಚದಲ್ಲಿ `ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ’ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ವಿವರಿಸಿದರು.
ವೃಕ್ಷೋದ್ಯಾನದಲ್ಲಿ ಜಾಗತಿಕ ಮಟ್ಟದ ಶಿಲ್ಪಕಲೋದ್ಯಾನ, ಎನ್ ಜಿಇಎಫ್ ವಸ್ತು ಸಂಗ್ರಹಾಲಯ ಕೂಡ ಇರಲಿವೆ. ಈ ಆವರಣದಲ್ಲಿ ಯಾವುದೇ ರೀತಿಯ ಮಾಲ್ ನಿರ್ಮಿಸುವುದಿಲ್ಲ. ಜೊತೆಗೆ ವೈವಿಧ್ಯಮಯ ಚಟುವಟಿಕೆಗಳನ್ನು ನಡೆಸಲು ಸುಸಜ್ಜಿತ ಆ್ಯಂಪಿ ಥಿಯೇಟರ್ ಕಟ್ಟಲಾಗುವುದು. ಇದರಿಂದ ನಗರದ ಪೂರ್ವ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ ಗಿಂತ ಒಳ್ಳೆಯ ಹಸಿರು ತಾಣವಾಗಲಿದೆ. ಇಲ್ಲಿ ಪ್ರವೇಶ ದ್ವಾರಕ್ಕೆ ಬೇಕಾದ ಸ್ವಲ್ಪ ಜಾಗ ಮಾತ್ರ ನಮ್ಮ ಮೆಟ್ರೋ ಅಧೀನದಲ್ಲಿದೆ. ಈ ಸಂಬಂಧವಾಗಿ ಅವರೊಂದಿಗೆ ಮಾತನಾಡಿ ಜಾಗವನ್ನು ಪಡೆದುಕೊಳ್ಳಲಾಗುವುದು ಎಂದು ಎಂಬಿಪಿ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 250 ಕೋಟಿ ವೆಚ್ಚದಲ್ಲಿ ವಿಶ್ವ ಗುರು ಬಸವಣ್ಣ ಉದ್ಯಾನವನಕ್ಕೆ ಕ್ಯಾಬಿನೆಟ್ ಒಪ್ಪಿಗೆ
ಏನೇನು ಇರುತ್ತೆ?
ಎನ್ ಜಿಇಎಫ್ ವೃಕ್ಷೋದ್ಯಾನವು ಹಂತ-1 ಪ್ರವೇಶ ದ್ವಾರದ ಪ್ಲಾಜಾ, ಎಲಿವೇಟೆಡ್ ವಾಕ್-ವೇ, ಸೈಕ್ಲಿಂಗ್ ಪಥ, ನೀರಿನ ಝರಿ/ಚಿಲುಮೆ/ಕಾರಂಜಿ, ಫುಡ್ ಕೋರ್ಟ್, ಮಕ್ಕಳು ಆಟವಾಡುವ ಜಾಗ, ಸಾಕುಪ್ರಾಣಿಗಳನ್ನು ಕರೆದುಕೊಂಡು ಬರುವ ಜಾಗ, ಶೌಚಾಲಯಗಳು ಮತ್ತು ಇನ್ನಿತರ ಮೂಲಸೌಕರ್ಯಗಳು ಇರಲಿದೆ.
ಎಲಿವೇಟೆಡ್-ವಾಕ್ ವೇಸ್, ವೀಕ್ಷಣಾ ಗೋಪುರ, ಮುಂಚಿನಿಂದಲೂ ಇರುವ ಆಡಳಿತ ವಿಭಾಗದ ನವೀಕರಣ, ಓಪನ್ ಆ್ಯಂಫಿ-ಥಿಯೇಟರ್ ಇವುಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಫೇಸ್-2ರಲ್ಲಿ ಎನ್ ಜಿಇಎಫ್ ಫ್ಯಾಕ್ಟರಿ ಇದ್ದಾಗ ಕಟ್ಟಿದ್ದ ಶೆಡ್ ಗಳನ್ನು ಸ್ಪೋರ್ಟ್ ಹಬ್, ಕಲೆ ಮತ್ತು ಸಂಸ್ಕೃತಿಗಳ ಕೇಂದ್ರ, ಸಮುದಾಯ ಭವನ ಮತ್ತು ಫುಡ್ ಕೋರ್ಟ್ ಇಷ್ಟನ್ನೂ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ.


