ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 62ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಕರಾರಸಾ ನಿಗಮವು ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಸಾರಿಗೆ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಮರ್ಪಕವಾದ ಸೇವೆಯನ್ನು ಒದಗಿಸುತ್ತಿದೆ ಎಂದರು. ಇದನ್ನೂ ಓದಿ: ಬೆಲೆ ಏರಿಕೆಯೇ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ – ಬೊಮ್ಮಾಯಿ ಟೀಕೆ
ಕೋವಿಡ್ ಸಂದರ್ಭದಲ್ಲಿ ಉಂಟಾದ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ನೂತನ ವಾಹನಗಳನ್ನು ಖರೀದಿಸಲಾಗದ ಪರಿಸ್ಥಿತಿಯಲ್ಲಿದ್ದಾಗ 8 ರಿಂದ 9 ಲಕ್ಷ ಕಿ.ಮಿ. ಕ್ರಮಿಸಿದ ತನ್ನ ಹಳೆಯ ಕವಚ ದುರಸ್ತಿ ವಾಹನಗಳನ್ನು ಪುನಶ್ಚೇತನಗೊಳಿಸಿ, ಇನ್ನೂ ಆ ವಾಹನಗಳನ್ನು 4-5 ಲಕ್ಷ ಕಿ.ಮಿ.ವರೆಗೆ ಕಾರ್ಯಾಚರಣೆಗೊಳಿಸಲು ಯೋಜನೆಯನ್ನು ರೂಪಿಸಲಾಗಿದೆ. ಹಳೆಯ ವಾಹನಗಳನ್ನು ಹೊಸ ವಾಹನಗಳಂತೆ ಪರಿವರ್ತಿಸಿ ಚಾಲನೆಗೆ ಬಳಸಿಕೊಳ್ಳುತ್ತಿರುವ ಕುರಿತು ಹಾಗೂ ಈ ಯೋಜನೆಯಲ್ಲಿ ತೊಡಗಿಸಿಕೊಂಡ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರುಗಳು, ತಾಂತ್ರಿಕ ಅಧಿಕಾರಿಗಳು ಹಾಗೂ ಕಾರ್ಯಾಗಾರದ ಸಿಬ್ಬಂದಿಗೆ ತಮ್ಮ ಅಭಿನಂದನೆಯನ್ನು ಸಲ್ಲಿಸಿ ಈ ಪ್ರಕ್ರಿಯೆಯನ್ನು ಮುಂದುವರಿಸುವಂತೆ ತಿಳಿಸಿದರು.
ಸರ್ಕಾರದ ಶಕ್ತಿ ಯೋಜನೆಯಡಿ ನಿಗಮಗಳು ತನ್ನ ಎಲ್ಲಾ ಸಂಪನ್ಮೂಲಗಳನ್ನು ಕ್ರೂಢಿಸಿಕೊಂಡು ಸಾರ್ವಜನಿಕರಿಗೆ ಬೇಡಿಕೆಗೆ ಅನುಗುಣವಾಗಿ ಅಗತ್ಯ ಸೇವೆಗಳನ್ನು ಒದಗಿಸಿ ಸರ್ಕಾರಕ್ಕೆ ಗೌರವ ತಂದಿರುವ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ವೇಳೆ ಸಚಿವರು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿನ ಲಭ್ಯವಿರುವ ಅನುಕಂಪಕದ ಅವಲಂಬಿತ ಖಾಲಿ ಹುದ್ದೆಗಳನ್ನು ಯಾವುದೇ ವಿಳಂಬವಿಲ್ಲದೇ ತುಂಬಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಿಗಮದಲ್ಲಿ 5 ವರ್ಷಗಳ ಕಾಲ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಅಲ್ಲದೆ ಬೆಂಗಳೂರು ಕೇಂದ್ರೀಯ ವಿಭಾಗದ 38 ಚಾಲಕರುಗಳಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ಈ ಬೆಳ್ಳಿ ಪದಕವು ಚಿನ್ನದ ಲೇಪನದೊಂದಿಗೆ 32 ಗ್ರಾಂ ತೂಕವಿದ್ದು, ವಿಜೇತ ಚಾಲಕರಿಗೆ 2,000 ರೂ. ನಗದು ಪುರಸ್ಕಾರ ಹಾಗೂ ಮಾಸಿಕ 250 ರೂ. ಭತ್ಯೆ ನೀಡಲಾಯಿತು.
ಸಮಾರಂಭದಲ್ಲಿ ಭಾ.ಆ.ಸೇ., (ನಿ) ಏಕ ಸದಸ್ಯ ಸಮಿತಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ, ಸರ್ಕಾರದ ಕಾರ್ಯದರ್ಶಿ ಡಾ. ಎನ್.ವಿ. ಪ್ರಸಾದ್, ಲ್ಲಿ ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕವಿ. ಅನ್ಬುಕುಮಾರ್, ಬೆಂ.ಮ.ಸಾ.ಸಂ.ನ ವ್ಯವಸ್ಥಾಪಕ ನಿರ್ದೇಶಕಿ ಜಿ. ಸತ್ಯವತಿ, ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Web Stories