ಬೆಂಗಳೂರು: ರಾಜ್ಯದಲ್ಲಿ ಧರ್ಮ ಸಂಘರ್ಷ ಮುಂದುವರಿದಿದ್ದು, ಇದೀಗ ಧರ್ಮ ಯುದ್ಧ ಅಂತ್ಯಕ್ಕೆ ಬುದ್ಧಿಜೀವಿಗಳು ಮನವಿ ಮಾಡಿದ್ದಾರೆ.
ಮುಸ್ಲಿಂ ವರ್ತಕರಿಗೆ ಬ್ಯಾನ್ ಸರಿಯಲ್ಲ. ಸಮವಸ್ತ್ರದೊಂದಿಗೆ ಹಿಜಬ್ಗೂ ಅವಕಾಶ ಕೊಡಿ ಎಂದು ಹೇಳುವ ಮೂಲಕ ಧರ್ಮ ಸಂಘರ್ಷಕ್ಕೆ ಇತಿಶ್ರೀ ಹಾಡಲು ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಲಾಗಿದೆ. ಬರೋಬ್ಬರಿ 61 ಸಾಹಿತಿಗಳಿಂದ ಸಿಎಂ ಬೊಮ್ಮಾಯಿಗೆ ಮೂರು ಮುಖ್ಯ ಅಂಶಗಳನ್ನೊಳಗೊಂಡ ಪತ್ರ ಬರೆಯಲಾಗಿದೆ. ಡಾ.ಕೆ.ಮರುಳ ಸಿದ್ದಪ್ಪ, ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ರೆಹಮತ್ ತರಿಕೆರೆ ಸೇರಿ ಒಟ್ಟು 61 ಸಾಹಿತಿಗಳು ಮನವಿ ಮಾಡಿಕೊಂಡಿದ್ದಾರೆ.
ಸಿಎಂಗೆ ಸಾಹಿತಿಗಳು ಬರೆದ ಪತ್ರದಲ್ಲೇನಿದೆ..?
ಶಾಂತಿಯ ನೆಲದಲ್ಲಿ ಮತಾಂಧತೆ, ಕೋಮುವಾದ ಅಟ್ಟಹಾಸ ಮೆರೆಯುತ್ತಿದೆ. ಪಠ್ಯದಲ್ಲಿ ಭಗವದ್ಗೀತೆಗಿಂತ ಸಂವಿಧಾನವನ್ನು ಓದುವುದು ಅತ್ಯಗತ್ಯ. ಸಮವಸ್ತ್ರದ ಭಾಗವಾಗಿಯೇ ಶಿರವಸ್ತ್ರ ಧರಿಸಿ ಪರೀಕ್ಷೆಗೆ ಅನುಮತಿಸಿ. ಸದ್ಯ ಇರುವ ವಸ್ತ್ರಸಂಹಿತೆ ಸುತ್ತೋಲೆ ಅವೈಜ್ಞಾನಿಕ, ಹಿಂತೆಗೆದುಕೊಳ್ಳಿ. ಸಾಮರಸ್ಯದ ತಾಣಗಳು ವಿವಾದದ ಕೇಂದ್ರಬಿಂದುಗಳಾಗಿದೆ. ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದು ಅಕ್ಷಮ್ಯ ಅಪರಾಧ.
ಸಾಮರಸ್ಯ ಹಾಳು ಮಾಡ್ತಿರುವವರ ವಿರುದ್ಧ ನಿದ್ರಾಕ್ಷಿಣ್ಯ ಕ್ರಮ ಕೈಗೊಳ್ಳಿ. ರಾಜ್ಯಾದ್ಯಂತ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿಷೇಧ ಸರಿಯಲ್ಲ. ಎಲ್ಲ ಜಾತ್ರೆ, ಉತ್ಸವಗಳು ಮುಸ್ಲಿಂ ಬಂಧುಗಳಿಲ್ಲದೇ ಸಂಪನ್ನವಾಗಲ್ಲ. ಒಂದು ಧರ್ಮದ, ಜಾತಿಯ ಉತ್ಸವಗಳಾಗಿ ಜಾತ್ರೆ ನಡೆಯಲ್ಲ. ಸಾಮರಸ್ಯದ ನಾಡಿನಲ್ಲಿ ಮುಸ್ಲಿಂ ವರ್ತಕರ ಬಹಿಷ್ಕಾರ ಅಸಂವಿಧಾನಿಕ ನಡೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇತ್ತ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್)ನ ವಕೀಲರಿಂದ ಇದನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗುವ ಚಿಂತನೆ ನಡೆಸಲಾಗಿದೆ. ಇದನ್ನೂ ಓದಿ: ಮತ್ತೊಮ್ಮೆ ಸಿಎಂ ಆದ ಯೋಗಿ ಆದಿತ್ಯನಾಥ್- ಕದ್ರಿ ಯೋಗೀಶ್ವರ ಮಠದಲ್ಲಿ ಸಂಭ್ರಮ