ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆರ್ ಎಚ್ ಕ್ಯಾಂಪ್-3 ರಲ್ಲಿ ಸುಮಾರು 4 ಲಕ್ಷ 50 ಸಾವಿರ ರೂ. ಬೆಲೆಬಾಳುವ ಹಂದಿ ಕಳ್ಳತನ ಮಾಡಿದ್ದ ಖದೀಮರು ಕೊನೆಗೂ ಸೆರೆಸಿಕ್ಕಿದ್ದಾರೆ.
ಸಿಂಧನೂರು ಪೋಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರ್ ಎಚ್ ಕ್ಯಾಂಪ್ 3 ರಲ್ಲಿ 2020 ಡಿಸೆಂಬರ್ 19 ರಂದು ಬಿಜನ್ ಮಂಡಲ್ ಎಂಬವರ ಜಮೀನಿನಲ್ಲಿ ಇದ್ದ 60 ಹಂದಿಗಳನ್ನ ಎರಡು ಬುಲೆರೋ ವಾಹನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದರು.
ದೂರು ದಾಖಲಿಸಿಕೊಂಡು ಪ್ರಕರಣ ಕೈಗೆತ್ತಿಕೊಂಡ ಸಿಂಧನೂರು ಗ್ರಾಮೀಣ ಠಾಣೆ ಪೋಲೀಸರು, ಇದೀಗ ಏಳು ಜನ ಕಳ್ಳರನ್ನ ಬಂಧಿಸಿದ್ದಾರೆ. ಅಂಬಣ್ಣ, ಮಂಜ, ಯಲ್ಲಪ್ಪ, ಹನುಮಂತ, ಹನುಮೇಶ, ದುರಗಪ್ಪ ಹಾಗೂ ವೆಂಕಟೇಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಹಂದಿ ಹಿಡಿಯುವ ಬಲೆಗಳು, ಟಾರ್ಚ್, ಬಡಿಗೆಗಳು ಸೇರಿದಂತೆ ಒಟ್ಟು 14 ಲಕ್ಷದ 52 ಸಾವಿರ ಬೆಲೆ ಬಾಳುವ ಸ್ವತ್ತನ್ನ ವಶಪಡಿಸಿಕೊಳ್ಳಲಾಗಿದೆ.