ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಲ್ಲಯನಪುರ ಗ್ರಾಮದಲ್ಲಿ ಮೇವು ಕೇಂದ್ರದಿಂದ ವಿತರಿಸಿದ ಮೇವನ್ನು ತಿಂದು ಆರು ಹಸುಗಳು ಸಾವನ್ನಪ್ಪಿವೆ.
ಗ್ರಾಮದ ಶಿವಯ್ಯ, ಬೆಲ್ಲಯ್ಯ, ಚಂದ್ರ, ಮರಿಸಿದ್ದಯ್ಯ ಮತ್ತು ದೊಡ್ಡಬಳ್ಳಯ್ಯ ಎಂಬ ರೈತರಿಗೆ ಸೇರಿದ ಹಸುಗಳು ಸಾವನ್ನಪ್ಪಿವೆ. ಭೀಕರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಸುಗಳಿಗೆ ಮೇವಿಲ್ಲದ ಕಾರಣ ಕೃಷಿ ಇಲಾಖೆಯಿಂದ ಮೇವು ಕೇಂದ್ರದ ಮೂಲಕ ವಿತರಿಸಲಾಗಿದ್ದ ಜೋಳದ ಪುಡಿಯನ್ನು ತಿಂದ ಆರು ಹಸುಗಳು ಸಾವನ್ನಪ್ಪಿವೆ.
ಹಸುಗಳು ಸಾವನ್ನಪ್ಪಿದ್ದರಿಂದ ರೈತರಿಗೆ ಒಂದೂವರೆ ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಇದಲ್ಲದೆ ಇನ್ನೂ ಕೆಲವು ಹಸುಗಳು ಮೇವನ್ನು ತಿಂದು ಅಸ್ವಸ್ಥಗೊಂಡಿವೆ. ಮೇವಿಲ್ಲದ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರಿಗೆ ಮೇವು ಒದಗಿಸಿ ರೈತರ ಮುಖದಲ್ಲಿ ಮಂದಹಾಸ ತಂದಿತ್ತು. ಆದರೆ ಇಂದು ನಡೆದಿರುವ ಘಟನೆಯಿಂದ ರೈತರು ಕಂಗಾಲಾಗಿದ್ದಾರೆ. ಸದ್ಯ ಪಶು ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡಿರುವ ಹಸುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.