ನೆಲಮಂಗಲ: ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣವನ್ನು ಕದ್ದು, ಪ್ರಖ್ಯಾತ ಕಂಪೆನಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಚಾಲಕನಾಗಿದ್ದ ಆರೋಪಿ ಮಂಜು ಅಲಿಯಾಸ್ ಮಂಜುನಾಥ ಹಳದಿ ಲೋಹ ಬಂಗಾರದ ಆಸೆಗೆ ಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಕುರಿತು ಪ್ರಕರಣ ದಾಖಲಿಸಿಕೊಂಡು ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಸುಮಾರು 54 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯಿಂದ ಪೊಲೀಸರು ಬರೋಬ್ಬರಿ 1 ಕೆ.ಜಿ 127 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ ವಶಕ್ಕೆ ಪಡೆದಿದ್ದಾರೆ.
ಉದ್ಯಮಿ ಚೇತನ್ ಕುಟುಂಬ ವಿದೇಶಕ್ಕೆ ತೆರಳಿದ್ದಾಗ ಅವರ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಆರೋಪಿ ಮಂಜುನಾಥ್ ಚಿಕ್ಕಬಿದರಕಲ್ಲು ಅಪಾರ್ಟ್ ಮೆಂಟ್ ನಲ್ಲಿ ಕಾರು ಚಾಲಕನಾಗಿದ್ದು, ಕದ್ದ ಆಭರಣಗಳನ್ನು ವಿವಿಧ ಪ್ರಖ್ಯಾತ ಕಂಪನಿಗಳಲ್ಲಿ ಮಾರಾಟ ಮಾಡಿದ್ದ.
ಮಾದನಾಯಕನಹಳ್ಳಿ ವೃತ್ತದ ಸಿಪಿಐ ಸತ್ಯನಾರಾಯಣ ನೇತೃತ್ವದ ಸಿಬ್ಬಂದಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮನೆ ಮಾಲೀಕರಿಗೆ ಚಿನ್ನಾಭರಣ ವಾಪಸ್ ವಿತರಣೆ ಮಾಡಿದ್ದಾರೆ. ಐಜಿಪಿ ಸೀಮಂತ್ ಕುಮಾರ್ ಸಿಂಗ್, ಎಸ್ಪಿ ರವಿ.ಡಿ ಚನ್ನಣ್ಣವರ್, ಎಎಸ್ಪಿ ಲಕ್ಷ್ಮಿಗಣೇಶ್, ಡಿವೈಎಸ್ ಪಿ ಮೋಹನ್ ಕುಮಾರು ಆಭರಣವನ್ನು ಹಸ್ತಾಂತರಿಸಿದರು. ಇತ್ತ ಕಾರ್ಯಚರಣೆಯಲ್ಲಿ ನಿರತರಾದ ಅಪರಾಧ ವಿಭಾಗದ ಸಿಬ್ಬಂದಿಗಳಿಗೆ ನಗದು ಬಹುಮಾನ ಸಮೇತ ಪ್ರಶಂಸೆ ಪತ್ರವನ್ನು ಐಜಿಪಿ ಸೀಮಂತ್ ಕುಮಾರ್ ಸಿಂಗ್ ನೀಡಿ ಅಭಿನಂದಿಸಿದರು.