ಬೆಳಗಾವಿ: ದೇಹದಾರ್ಢ್ಯ ಸೇರಿದಂತೆ ದೇಹ ದಂಡಿಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಹುತೇಕ ಮಾಂಸಾಹಾರಿ ಆಗಿರುತ್ತಾರೆ. ಆದರೆ ಸಸ್ಯಾಹಾರಿ ಸೇನಾಧಿಕಾರಿಯೊಬ್ಬರು ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಶಂಕರ್ ಕರಜಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಂಕರ್ ಕರಜಗಿ ಕನ್ನಡಿಗರು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿರುವ ಶಂಕರ್ ಟೆರಿಟೋರಿಯಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
17 ಗಂಟೆಯ ಅವಧಿಯಲ್ಲಿ ಶಂಕರ್ ಅವರು 3 ಕಿ.ಮೀ ಸಮುದ್ರದಲ್ಲಿ ಈಜುವ, ನಂತರ 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗು 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೆಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಯಶಸ್ವಿಯಾಗಿ ನಿಭಾಯಿಸಿ ಐರನ್ ಮ್ಯಾನ್ ಪ್ರಶಸ್ತಿ ಜಯಿಸಿದ್ದಾರೆ. ಇವರ ಸಾಧನೆ ಮೆಚ್ಚಿರುವ ಸೇನೆ, ಈಗ ಸೇನಾಪದಕ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಸಾಮಾನ್ಯವಾಗಿ ದೇಹದಂಡನೆಗೆ ಕನಿಷ್ಠ ಮೊಟ್ಟೆಯನ್ನಾದರೂ ಸೇವಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಶಂಕರ್ ಅವರು ಪಕ್ಕಾ ಸಸ್ಯಾಹಾರಿ. ರಾತ್ರಿ ಊಟ ಕೂಡ ಮಾಡದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಂಕರ್ ಅವರಿಗೆ ಸದ್ಯ 53 ವಯಸ್ಸು. ಈ ವಯಸ್ಸಿನಲ್ಲಿ ಗಣನೀಯ ಸಾಧನೆ ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮಾಂಸಾಹಾರ ಸೇವಿಸಿಯೇ ಇಂತಹ ಕಠಿಣ ಸ್ಪರ್ಧೆಯಲ್ಲಿ ಭಾಗಿಯಾಗಬೇಕು ಎನ್ನುವ ಮನಸ್ಥಿತಿಯನ್ನು ಬದಿಗಿಟ್ಟು ಯುವಕರೇ ನಾಚಿಸುವಂಥ ಸಾಧನೆ ಮಾಡಿದ್ದಾರೆ. ಶಂಕರ್ ಅವರು ಬೆಂಗಳೂರಿನ ಎಂಜಿ ರಸ್ತೆಯ ಭಾರತ್ ಪೆಟ್ರೋಲಿಯಂ ಬ್ರಾಂಚ್ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.