– ಅನಾರೋಗ್ಯದ ಪುತ್ರನಿಗಾಗಿ 6 ರಾಜ್ಯ ದಾಟಿದ ಅಮ್ಮ
ತಿರುವನಂತಪುರಂ: ಇತ್ತೀಚೆಗೆ ಲಾಕ್ಡೌನ್ ಮಧ್ಯೆ ಮನೆಗೆ ಬರಲು ಪರದಾಡುತ್ತಿದ್ದ ಮಗನಿಗಾಗಿ ಒಬ್ಬರೇ ಸ್ಕೂಟಿಯಲ್ಲಿ 1,400 ಕಿಮೀ ಪ್ರಯಾಣಿಸಿ ಆತನನ್ನು ಕರೆತಂದಿದ್ದರು. ಇದೀಗ ಕೇಳರದಲ್ಲಿ ಲಾಕ್ಡೌನ್ ನಿರ್ಬಂಧಗಳ ನಡುವೆಯೂ ಅನಾರೋಗ್ಯದ ಮಗನನ್ನು ಭೇಟಿಯಾಗಲು ತಾಯಿಯೊಬ್ಬರು 6 ರಾಜ್ಯಗಳನ್ನು ದಾಟಿ 2,700 ಕಿ.ಮೀ. ಪ್ರಯಾಣ ಮಾಡಿದ್ದಾರೆ.
50 ವರ್ಷದ ಶೀಲಮ್ಮ ವಾಸನ್ ರಾಜಸ್ಥಾನದ ಜೋಧ್ಪುರದಲ್ಲಿದ್ದ ತನ್ನ ಮಗನಿಗಾಗಿ 2,700 ಕಿಲೋ ಮೀಟರ್ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ. ಶೀಲಮ್ಮ ಅವರ ಮಗ ಅರುಣ್ ಕುಮಾರ್ (29) ಬಿಎಸ್ಎಫ್ ಸೈನಿಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ಕಾರಿನಲ್ಲಿ ಮಹಿಳೆಯ ಸೊಸೆ ಮತ್ತು ಇನ್ನೊಬ್ಬ ಸಂಬಂಧಿಕರೊಂದಿಗೆ ಇದ್ದರು. ಮೂರು ದಿನಗಳ ನಂತರ ತನ್ನ ಅನಾರೋಗ್ಯದ ಮಗನನ್ನು ಭೇಟಿ ಮಾಡಿದ್ದಾರೆ.
ಅರುಣ್ ಕುಮಾರ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಜೋಧ್ಪುರದ ಏಮ್ಸ್ ನ ವೈದ್ಯರೊಬ್ಬರು ಫೋನ್ ಮಾಡಿ ಕುಟುಂಬಕ್ಕೆ ಮಾಹಿತಿ ತಿಳಿಸಿದ್ದರು. ನಂತರ ಅವರು ಕೇರಳದಿಂದ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮೂಲಕ ರಾಜಸ್ಥಾನ ತಲುಪಲು ನಿರ್ಧರಿಸಿದ್ದರು.
ಅದರಂತೆಯೇ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದು, ರಾಜ್ಯಗಳಾದ್ಯಂತ ಪ್ರಯಾಣ ಮಾಡಲು ಅಗತ್ಯವಾದ ಪಾಸ್ಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಕೇಂದ್ರ ಸಚಿವ ವಿ ಮುರಳೀಧರನ್, ಸಿಎಂ ಪಿಣರಾಯಿ ವಿಜಯನ್ ಕಚೇರಿ ಮತ್ತು ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಅವರ ಸಹಾಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮಗನನ್ನು ಕರೆತರಲು 1,400 ಕಿಮೀ ದೂರ ಒಬ್ಬರೇ ಸ್ಕೂಟಿಯಲ್ಲಿ ಹೋದ ತಾಯಿ
ಈ ಬಗ್ಗೆ ಮಾತನಾಡಿದ ಶೀಲಮ್ಮ ವಾಸನ್, ಸ್ನಾಯುಗಳ ಉರಿಯೂತನಿಂದ ಬಳಲುತ್ತಿದ್ದ ನನ್ನ ಮಗನ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ದೇವರ ಅನುಗ್ರಹದಿಂದಾಗಿ ನಾವು ಬರುವ ಮಾರ್ಗದಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಇಲ್ಲಿಗೆ ತಲುಪಿದ್ದೇವೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸಂಘಟನೆಯ ಹಿಂದೂ ಸಹಾಯವಾಣಿಯ ಸ್ವಯಂಸೇವಕರು ಜೋಧ್ಪುರಕ್ಕೆ ಕರೆದುಕೊಂಡು ಹೋಗಲು ಕ್ಯಾಬ್ ಮತ್ತು ಇಬ್ಬರು ಟ್ಯಾಕ್ಸಿ ಚಾಲಕರನ್ನು ಉಚಿತವಾಗಿ ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ವಿಡಿಯೋ: ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ
ಅರುಣ್ ಕುಮಾರ್ ಫೆಬ್ರವರಿಯಲ್ಲಿ ರಜೆಯ ಮೇಲೆ ತನ್ನ ಗ್ರಾಮಕ್ಕೆ ಬಂದಿದ್ದರು. ಆದರೆ ವಾಪಸ್ ಹೋಗಿದ್ದ ಕೆಲವು ದಿನಗಳ ನಂತರ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ತನ್ನ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಬೇಕೆಂದು ಇಷ್ಟಪಟ್ಟಿದ್ದರು.