ರಾಯಚೂರು: ಕಲ್ಲಿದ್ದಲು ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಶಕ್ತಿನಗರದಲ್ಲಿ ಇರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್ಟಿಪಿಎಸ್) ಮತ್ತೊಂದು ವಿದ್ಯುತ್ ಘಟಕ ಬಂದ್ ಆಗಿದೆ. ಕಲ್ಲಿದ್ದಲು ಸಮಸ್ಯೆ ಪುನಃ ಉಲ್ಬಣ ಹಿನ್ನೆಲೆಯಲ್ಲಿ ವಿದ್ಯುತ್ ಕೇಂದ್ರದ ಒಟ್ಟು 8 ಘಟಕಗಳಲ್ಲಿ 5 ಘಟಕಗಳು ಕಾರ್ಯಸ್ಥಗಿತವಾಗಿವೆ.
ಸದ್ಯ ಕೇವಲ 3 ಘಟಕಗಳಿಂದ 480 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. 1720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವಿದ್ಯುತ್ ಕೇಂದ್ರದಲ್ಲಿ ಈಗ ಕನಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇಂದು ಕೇವಲ ಎರಡು ರೇಕ್ (1 ರೇಕ್ನಲ್ಲಿ 3500 ಟನ್ ಕಲ್ಲಿದ್ದಲು) ಕಲ್ಲಿದ್ದಲು ಬಂದಿದ್ದು, ಸದ್ಯ ಒಂದು ದಿನಕ್ಕೆ ಮಾತ್ರ ಸಾಕಾಗುವಷ್ಟು ಕಲ್ಲಿದ್ದಲು ಸಂಗ್ರಹಣೆ ಇದೆ. ವಿದ್ಯುತ್ ಕೇಂದ್ರಕ್ಕೆ ಬರುತ್ತಿರುವ ಒದ್ದೆಯಾದ ಕಲ್ಲಿದ್ದಲನ್ನೇ ಬಳಕೆ ಮಾಡಲಾಗುತ್ತಿದೆ. ಇದನ್ನೂ ಓದಿ: ಬಿಎಸ್ವೈ ಆಪ್ತರ ಬಳಿ 765 ಕೋಟಿ ಅಕ್ರಮ ಆಸ್ತಿ
ಕಲ್ಲಿದ್ದಲು ಸಮಸ್ಯೆಯಿಂದಾಗಿ ದಿನೇ ದಿನೇ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗುತ್ತಿದೆ. ಕಲ್ಲಿದ್ದಲು ಗಣಿಗಳಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ಅಲ್ಪ ಪ್ರಮಾಣದ ಕಲ್ಲಿದ್ದಲು ಸರಬರಾಜು ಆಗುತ್ತಿದೆ. ರಾಯಚೂರಿನ ಆರ್ಟಿಪಿಎಸ್ ಹಾಗೂ ವೈಟಿಪಿಎಸ್ ಮತ್ತು ಬಳ್ಳಾರಿಯ ಬಿಟಿಪಿಎಸ್ಗೆ ಸದ್ಯ ಪ್ರತಿನಿತ್ಯ 9 ರೇಕ್ ಬರಬೇಕಿದೆ. ಅದರಲ್ಲೂ ಕುಂಠಿತವಾಗಿದ್ದು ವಿದ್ಯುತ್ ಉತ್ಪಾದನೆ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಇದರಿಂದ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ತಲೆದೂರುವ ಸಾಧ್ಯತೆ ದಿನೇ ದಿನೇ ಹೆಚ್ಚಾಗುತ್ತಿದೆ.