ಬೆಂಗಳೂರು: ಪೋಷಕರಿಗೆ ಟ್ಯೂಷನ್ ಗೆ ಹೋಗೋದಾಗಿ ಹೇಳಿ ನಗರದ ಐವರು ಬಾಲಕರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಸೋಮವಾರ ಸಂಜೆ ಟ್ಯೂಷನ್ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆದರೆ ತುಂಬಾ ಸಮಯವಾದರೂ ಅವರು ಟ್ಯೂಷನ್ ನಿಂದ ಮನೆಗೆ ವಾಪಸ್ ಬಂದಿಲ್ಲ. ನಂತರ ಮಕ್ಕಳ ನಾಪತ್ತೆಯಿಂದ ಪೋಷಕರು ಕಂಗಾಲಾಗಿದ್ದು, ರಾತ್ರಿಯಿಡೀ ಹುಡುಕಾಡಿ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾರೆ.
ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳು ಸೆಂಟ್ ಕ್ಲಾರೆನ್ಸ್ ಶಾಲೆಯವರಾಗಿದ್ದು, ಒಂದೇ ಸೆಕ್ಷನ್ ನಲ್ಲಿ ಓದುತ್ತಿದ್ದರು.
ವಿದ್ಯಾರ್ಥಿಗಳು ಈ ಹಿಂದೆ ಪಾರಿವಾಳ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದು ಅದೇ ಘಟನೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿದ್ಯಾರ್ಥಿಗಳು ಮನೆಯಿಂದ ಹೋಗುವಾಗ ಹಣವಾಗಲಿ ಬಟ್ಟೆಯಾಗಲಿ ತಗೆದುಕೊಂಡು ಹೋಗಿಲ್ಲ.
ಐವರು ಬಾಲಕರಲ್ಲಿ ಓರ್ವನ ಬಳಿ ಮೊಬೈಲ್ ಇದ್ದು, ಅದು ಕಾಮಾಕ್ಷಿಪಾಳ್ಯದಲ್ಲಿ ಸ್ವಿಚ್ ಆಫ್ ಆಗಿದೆ. ಬಾಲಕರ ನಾಪತ್ತೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಆದರೆ ಘಟನೆ ನಡೆದು 6-7 ಗಂಟೆಯಾದರೂ ಮಕ್ಕಳ ಬಗ್ಗೆ ಸುಳಿವು ಸಿಗಲಿಲ್ಲ. ಇದರಿಂದ ಪೋಷಕರು ಕಂಗಲಾಗಿದ್ದಾರೆ.
ವಿಜಯನಗರ ಎಸಿಪಿ ಪರಮೇಶ್ವರ ಹೆಗ್ಗಡೆ ನೇತೃತ್ವದಲ್ಲಿ ನಾಪತ್ತೆಯಾದ ಮಕ್ಕಳ ಪತ್ತೆಗಾಗಿ ವಿಶೇಷ ತಂಡ ರಚನೆಯಾಗಿದೆ. ಬೆಂಗಳೂರಿನ ವಿವಿಧ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಮಕ್ಕಳಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಕಂಟ್ರೋಲ್ ರೂಮ್ ಗಳಿಗೆ ಮಕ್ಕಳ ಫೋಟೋ ಸಹಿತ ಮಾಹಿತಿ ರವಾನೆ ಮಾಡಲಾಗಿದೆ.