ಭುವನೇಶ್ವರ್: ಮಂಗಳಮುಖಿ ರಾಣಿ ಕಿನ್ನಾರ ಭಾರತದ ಮೊದಲ 5 ಸ್ಟಾರ್ ಊಬರ್ ಕ್ಯಾಬ್ ಡ್ರೈವರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ರಸ್ತೆ, ನಿಲ್ದಾಣ, ರೈಲ್ವೇ, ಮಾರುಕಟ್ಟೆಗಳಲ್ಲಿ ಭಿಕ್ಷೆ ಬೇಡದೇ ರಾಣಿ ಕಿನ್ನಾರ ಸ್ವಾಭಿಮಾನದ ಜೀವನ ನಡೆಸುವ ಮೂಲಕ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ.
ರಾಣಿ ಕಿನ್ನಾರ ಭುವನೇಶ್ವರದ ನಿವಾಸಿಯಾಗಿದ್ದು, ಫೈವ್ ಸ್ಟಾರ್ ಕ್ಯಾಬ್ ಡ್ರೈವರ್ ಆಗಿದ್ದಾರೆ. ಆಟೋ ರಿಕ್ಷಾದಿಂದ ತಮ್ಮ ಡ್ರೈವರ್ ವೃತ್ತಿ ಆರಂಭಿಸಿದ್ದ ರಾಣಿ ಇಂದು ಬಹುಜನರ ಮೆಚ್ಚಿನ ಡ್ರೈವರ್ ಆಗಿದ್ದಾರೆ.
2016ರಲ್ಲಿ ಆಟೋ ಮೂಲಕ ನಾನು ನನ್ನ ವೃತ್ತಿ ಜೀವನ ಆರಂಭಿಸಿದೆ. ಜನರು ನನ್ನ ಆಟೋ ಹತ್ತಲು ಹಿಂದೇಟು ಹಾಕಿದ್ದರಿಂದ ಕೆಲಸ ಕೈ ಹಿಡಿಯಲಿಲ್ಲ. 2017ರ ಪುರಿಯಲ್ಲಿ ನಡೆದ ರಥಯಾತ್ರೆ ಸಂಧರ್ಭ ನಾನು ಸ್ವಯಂಪ್ರೇರಿತಗೊಂಡು ಆಂಬುಲೆನ್ಸ್ ಚಾಲನೆ ಮಾಡಿದೆ. ಈ ವೇಳೆ ನನಗೆ ಊಬರ್ ಕ್ಯಾಬ್ ಕಂಪನಿಯ ಮಾಜಿ ಉದ್ಯೋಗಿ ಪರಿಚಯವಾದರು. ಅಂದು ಅವರು ನೀವು ಕ್ಯಾಬ್ ಡ್ರೈವರ್ ಆಗಿ ಸಲಹೆ ನೀಡಿದರು ಎಂದು ರಾಣಿ ಕಿನ್ನಾರ ಹೇಳುತ್ತಾರೆ.
ಮಾಜಿ ಉದ್ಯೋಗಿಯ ಸಲಹೆ ಮೇರೆಗೆ ಕಂಪನಿಯ ಸಂದರ್ಶನಕ್ಕೆ ಹಾಜರಾಗಿ ಪಾಸಾದೆ. ಕಂಪನಿಯ ನಿಯಮದಂತೆ ಸ್ವಂತ ಕಾರ್ ಖರೀದಿಸಿ ಊಬರ್ ಕ್ಯಾಬ್ ಡ್ರೈವರ್ ಆದೆ. ಸದ್ಯ ನನಗೆ ನಿಶ್ಚಿತ ಪ್ರಯಾಣಿಕರು ಲಭ್ಯವಿದ್ದು, ನನ್ನ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ವಿಶೇಷವಾಗಿ ರಾತ್ರಿ ಮಹಿಳೆಯರು ಸುರಕ್ಷತೆ ದೃಷ್ಟಿಯಿಂದ ನನ್ನ ಕಾರಿನಲ್ಲಿಯೇ ಪ್ರಯಾಣಿಸಲು ಇಷ್ಟಪಡುತ್ತಾರೆ ಎಂದು ರಾಣಿ ತಿಳಿಸುತ್ತಾರೆ.
ರಾಣಿ ಕಿನ್ನಾರವರನ್ನು ನೋಡಿದ ಸ್ಥಳೀಯ ಮಂಗಳಮುಖಿಯರು ಭಿಕ್ಷೆ ಬೇಡೋದನ್ನು ಬಿಟ್ಟು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಪುರುಷ ಡೈವರ್ ಗಳಿಗಿಂದ ರಾಣಿಯವರು ಹೆಚ್ಚು ಪ್ರಯಾಣಿಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ ಎಂದು ಮತ್ತೋರ್ವ ಮಂಗಳಮುಖಿ ಸ್ನೇಹಶ್ರೀ ಹೇಳುತ್ತಾರೆ.