ಕೊಪ್ಪಳ: ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರು ರಕ್ಷಣಾ ಸಿಬ್ಬಂದಿಯನ್ನೂ ರಕ್ಷಣೆ ಮಾಡಲಾಗಿದೆ.
ಘಟನೆ ನಡೆದ ಕೂಡಲೇ ನಾಲ್ವರನ್ನು ರಕ್ಷಿಸಲಾಗಿದ್ದು, ಆ ಬಳಿಕ ಗಿಡ ಹಿಡಿದುಕೊಂಡಿದ್ದ ಸಿಬ್ಬಂದಿಯನ್ನು ಕೂಡ ರಕ್ಷಿಸುವ ಮೂಲಕ ಐವರು ರಕ್ಷಣಾ ಸಿಬ್ಬಂದಿ ಕೂಡ ಸೇಫಾಗಿದ್ದಾರೆ.
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಐವರಲ್ಲಿ ಓರ್ವ ಸಿಬ್ಬಂದಿಗೆ ಗಿಡ ಆಸರೆ ಆಗಿದೆ. ಸುಮಾರು 2 ಗಂಟೆ ಕಾಲ ಗಿಡ ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಎನ್ಡಿಆರ್ಎಫ್ ತಂಡ ಹೆಲಿಕಾಪ್ಟರ್ ಮೂಲಕ ಸಿಬ್ಬಂದಿಯನ್ನು ರಕ್ಷಣೆ ಮಾಡಿದೆ.
ವಿರುಪಾಪುರ ಗಡ್ಡಿಯಲ್ಲಿ ಸಿಲುಕಿದ್ದ ವಿದೇಶಿಗರು ಸೇರಿ ಸುಮಾರು 300 ಮಂದಿಯನ್ನು ರಕ್ಷಣೆ ಮಾಡಲು ಸಿಬ್ಬಂದಿ ತೆರಳಿದ್ದರು. ಆದರೆ ತುಂಗಭದ್ರಾ ನದಿ ನೀರಿನ ರಭಸಕ್ಕೆ ಬೋಟ್ ಮುಗುಚಿ ಬಿದ್ದ ಹಿನ್ನಲೆಯಲ್ಲಿ ಎನ್ಡಿಆರ್ಎಫ್ ತಂಡದ ಇಬ್ಬರು ಹಾಗೂ ಬೋಟ್ ನಲ್ಲಿದ್ದ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ವೇಳೆ ಸಿಬ್ಬಂದಿ ಲೈಫ್ ಜಾಕೆಟ್ ಹಾಕಿದ್ದರಿಂದ ಸೇಫ್ ಆಗಿದ್ದರು. ದುರ್ಘಟನೆ ನಡೆದ ಕೂಡಲೇ ಸ್ಥಳೀಯರು, ಇತರ ಸಿಬ್ಬಂದಿ ಹಾಗೂ ಹೆಲಿಕಾಪ್ಟರ್ ಕೂಡಲೇ ಜೀವ ಉಳಿಸಿದವರಿಗಾಗಿ ಹುಡುಕಾಟ ನಡೆಸಿತ್ತು. ಮೊದಲು ಮೂವರನ್ನು ರಕ್ಷಿಸಿದ ಎನ್ಡಿಆರ್ಎಫ್ ತಂಡ ಈಗ ಉಳಿದ ಇಬ್ಬರನ್ನು ಕೂಡ ರಕ್ಷಿಸಿದೆ.