ಬೆಂಗಳೂರು: ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ತಡರಾತ್ರಿ ಬಂಧಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಗಳಾದ ತಮಿಳುನಾಡಿನ ಹೊಸೂರು ಮೂಲದ ವೆಂಕಟರಾಜು, ಶಂಕರ್, ಮುರಳಿ, ನಾಗೇಶ್ ಹಾಗೂ ನಾಗರಾಜು ಅತ್ತಿಬೆಲೆ ಸಮೀಪದ ಟಿವಿಎಸ್ ಕ್ರಾಸ್ ಬಳಿ ಭಾನುವಾರ ತಡರಾತ್ರಿ 2 ಕಾರುಗಳಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅತ್ತಿಬೆಲೆ ಸಿಪಿಐ ರಾಜೇಶ್, ಎಸ್.ಐ ಗಜೇಂದ್ರ, ಕ್ರೈಮ್ ಸಿಬ್ಬಂದಿ ಪ್ರಭು ಹಾಗೂ ನಟರಾಜು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ 2 ಲಾಂಗ್ ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು 10 ದಿನಗಳ ಹಿಂದೆ ವ್ಯಕ್ತಿಯೊಬ್ಬನನ್ನು ಅಡ್ಡಗಟ್ಟಿ 20,000 ಸಾವಿರ ರೂ. ನಗದು ಪರ್ಸ್ ಹಾಗೂ ಚಿನ್ನಾಭರಣ ದೋಚಿದ ಪ್ರಕರಣ ಸೇರಿದಂತೆ ಅತ್ತಿಬೆಲೆ ಹಾಗೂ ಸರ್ಜಾಪುರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಮುಖ ಆರೋಪಿಗಳಾದ ನಾಗರಾಜು ಹಾಗೂ ಶಂಕರ್ ನ ಮೇಲೆ ತಮಿಳುನಾಡಿನ ಹೊಸೂರು ಪೊಲೀಸ್ ಠಾಣೆಯಲ್ಲಿ 8 ಸರಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.