ಬೆಂಗಳೂರು: ರವಿ ಅಕ್ಷಯ ಅಡ್ವರ್ಟೈಸಿಂಗ್ ಮಾಲೀಕ ಪರಮೇಶ್ರನ್ನು ಬಸವೇಶ್ವರ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಎರಡು ಕನಸು ಚಿತ್ರದ ನಿರ್ದೇಶಕ ಮದನ್ರನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದ ಪ್ರಮೋಷನ್ಗಾಗಿ ನಿರ್ದೇಶಕ ಮದನ್, ಪರಮೇಶ್ಗೆ 16.3 ಲಕ್ಷ ಹಣ ಕೊಟ್ಟಿದ್ದರು. ಚಿತ್ರದ ಪ್ರಮೋಷನ್ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ 8 ಲಕ್ಷ ರೂ. ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ನಡುವೆ ನಿರ್ದೇಶಕ ಮದನ್ರಿಂದ ಪರಮೇಶ್ ಅಂತರ ಕಾಯ್ದುಕೊಂಡಿದ್ದರು. ಪರಮೇಶ್ ಹಣ ಕೊಡಲು ನಿರಾಕರಿಸಿದಾಗ ಮದನ್ ತನ್ನ ಸಹಚರರಾದ ಚಲಪತಿ, ಕಿರಣ್, ಮೂರ್ತಿ ಮತ್ತು ಮೋಹನ್ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿದ್ದಾರೆ.
ಮೂರು ದಿನಗಳ ಹಿಂದೆ ಪರಮೇಶ್ರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು, ಬಳಿಕ ಬ್ಯಾಟ್ ಮತ್ತು ಬೆಲ್ಟ್ನಿಂದ ಪರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ದೇವನಹಳ್ಳಿ ಹತ್ತಿರ ಡೈರೆಕ್ಟರ್ ಮದನ್ ಸೇರಿದಂತೆ ಐವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.