ಗದಗ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಿದೆ. ಅದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಮಹತ್ವದ ಸ್ಥಾನ ಪಡೆಕೊಂಡಿವೆ.
ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿರುವ ಗದಗ ಜಿಲ್ಲೆಯು ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ತಾಣವಾಗಿಯೂ ಗಮನ ಸೆಳೆಯುತ್ತಿದೆ. ಇದೀಗ ರಾಜ್ಯ ಸರ್ಕಾರ ಗುರುತು ಮಾಡಿರುವ 1,275 ಹೊಸ ಪ್ರವಾಸಿ ತಾಣಗಳ ಪೈಕಿ ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ವೀರೇಶ್ವರ ಪುಣ್ಯಾಶ್ರಮ, ವೀರಗಲ್ಲು, ಸಬರಮತಿ ಆಶ್ರಮದ ಪ್ರತಿರೂಪ ಸೇರಿದಂತೆ ಒಟ್ಟು 45 ತಾಣಗಳು ಸೇರಿಕೊಂಡಿವೆ. ಇದನ್ನೂ ಓದಿ: ಜಾತಿಗಣತಿಗೆ ಡಿಕೆಶಿ ಸೇರಿ ಹಲವು ಸಚಿವರ ಆಕ್ಷೇಪ, ನನಗೆ ಮೇಲ್ವರ್ಗದ ವಿರೋಧಿ ಅಂತಾ ಪಟ್ಟ ಕಟ್ಟುತ್ತಾರೆ: ಸಿಎಂ
ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶಗಳನ್ನು ಆಧರಿಸಿ, ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ಆಧಾರದ ಮೇಲೆ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯವಾದ ಕ್ರಿಯಾ ಯೋಜನೆಗಳು ಮತ್ತು ಅಂದಾಜು ವೆಚ್ಚಗಳನ್ನು ಸಿದ್ಧಪಡಿಸಿ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಹೊಸ ಪ್ರವಾಸಿ ತಾಣಗಳ ಗುರುತಿಸುವಿಕೆಯಿಂದಾಗಿ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆ ಗರಿಗೆದರಿದೆ. ವಿಶೇಷವಾಗಿ ರಾಜ್ಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅನೇಕ ಧಾರ್ಮಿಕ ತಾಣಗಳು, ಐತಿಹಾಸಿಕ ದೇವಸ್ಥಾನಗಳು ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಆಕರ್ಷಿಸಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಪ್ರವಾಸಿ ತಾಣಗಳ ವಿವರ:
ಗದಗ ತಾಲೂಕು:
* ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ)
* ಶ್ರೀ ವೀರನಾರಾಯಣ ದೇವಸ್ಥಾನ
* ಶ್ರೀ ತ್ರಿಕೂಟೇಶ್ವರ ದೇವಸ್ಥಾನ
* ಶ್ರೀ ಸೋಮೇಶ್ವರ ದೇವಸ್ಥಾನ
* ಶ್ರೀ ರಾಮೇಶ್ವರ ದೇವಸ್ಥಾನ
* ಶ್ರೀ ತೋಂಟದಾರ್ಯ ಮಠ
* ಶ್ರೀ ವೀರೇಶ್ವರ ಪುಣ್ಯಾಶ್ರಮ
* ಜಾಮಿಯಾ ಮಸೀದಿ
* ಬೆಟಗೇರಿ ಚರ್ಚ್
* ಸಬರಮತಿ ಆಶ್ರಮ
* ಶ್ರೀರಾಮಕೃಷ್ಣ ಆಶ್ರಮ
* ಶ್ರೀ ವೆಂಕಟೇಶ್ವರ ದೇವಸ್ಥಾನ, ವೆಂಕಟಾಪುರ
* ದಾವಲಮಲಿಕ ದರ್ಗಾ, ಮುಳಗುಂದ
* ಶ್ರೀ ಸಿದ್ದೇಶ್ವರ ದೇವಸ್ಥಾನ, ಮುಳಗುಂದ
* ಚಂದ್ರನಾಥ ಬಸದಿ, ಮುಳಗುಂದ
* ಶ್ರೀ ಪಾರ್ವತಿ-ಪರಮೇಶ್ವರ ದೇವಸ್ಥಾನ, ಹರ್ತಿ
* ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
* ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
* ಬೆಟಗೇರಿಯ ವೀರಗಲ್ಲುಗಳು
* ಸರ್ಕಾರಿ ವಸ್ತು ಸಂಗ್ರಹಾಲಯ
* ಬ್ರಹ್ಮ, ಜೀನಾಲಯ ದೇವಸ್ಥಾನ, ಲಕ್ಕುಂಡಿ
* ಶ್ರೀ ನನ್ನೇಶ್ವರ ದೇವಸ್ಥಾನ, ಲಕ್ಕುಂಡಿ
* ಮುಸಕಿನ ಭಾವಿ, ಲಕ್ಕುಂಡಿ
* ಶ್ರೀ ಕಾಶಿವಿಶ್ವೇಶ್ವರ ದೇವಸ್ಥಾನ, ಲಕ್ಕುಂಡಿ
* ಶ್ರೀ ಹಾಲಗುಂಡಿ ಬಸವೇಶ್ವರ ದೇವಸ್ಥಾನ, ಲಕ್ಕುಂಡಿ
* ವಸ್ತು ಸಂಗ್ರಹಾಲಯ, ಲಕ್ಕುಂಡಿ
ಮುಂಡರಗಿ ತಾಲೂಕು:
* ಶ್ರೀ ವೀರಭದ್ರೇಶ್ವರ ದೇವಸ್ಥಾನ, ಸಿಂಗಟಾಲೂರು
* ಹಮ್ಮಿಗಿ ಬ್ಯಾರೇಜ್, ಹಮ್ಮಿಗಿ.
* ಶ್ರೀ ಅನ್ನದಾನೇಶ್ವರ ಮಠ, ಮುಂಡರಗಿ.
* ಕಪ್ಪತ್ತಗುಡ್ಡ.
* ಶ್ರೀ ದೊಡ್ಡಬಸಪ್ಪ ದೇವಸ್ಥಾನ, ಡಂಬಳ.
* ಶ್ರೀ ಸೋಮೇಶ್ವರ ದೇವಸ್ಥಾನ, ಡಂಬಳ.
* ವಿಕ್ಟೋರಿಯಾ ರಾಣಿ ಕೆರೆ, ಡಂಬಳ.
* ಜಪದ ಬಾವಿ, ಡಂಬಳ
ರೋಣ ಹಾಗೂ ಗಜೇಂದ್ರಗಡ:
* ಶ್ರೀ ಕಲ್ಲೇಶ್ವರ ದೇವಸ್ಥಾನ, ರೋಣ
* ಗಜೇಂದ್ರಗಡ ಕೋಟೆ, ಗಜೇಂದ್ರಗಡ
* ಶ್ರೀ ಕಾಲಕಾಲೇಶ್ವರ ಕ್ಷೇತ್ರ, ಗಜೇಂದ್ರಗಡ
* ಶ್ರೀ ನಾಗೇಶ್ವರ ದೇವಸ್ಥಾನ (ಜೋಡು ಕಳಸ), ಸೂಡಿ
* ರಸದ ಬಾವಿ ನಾಗನ ಹೊಂಡ, ಗಜೇಂದ್ರಗಡ
* ಶ್ರೀ ಭೀಮಾಂಬಿಕ ದೇವಸ್ಥಾನ, ಇಟಗಿ
* ಶ್ರೀ ಶಂಭುಲಿಂಗ ದೇವಸ್ಥಾನ, ಇಟಗಿ
ಶಿರಹಟ್ಟಿ ತಾಲೂಕು:
* ಶ್ರೀ ಫಕೀರೇಶ್ವರ ಮಠ. ಶಿರಹಟ್ಟಿ
* ಶ್ರೀ ಹೊಳಲಮ್ಮದೇವಿ ದೇವಸ್ಥಾನ, ಶ್ರೀಮಂತಗಡ
* ಕೋಟೆ, ಶಿರಹಟ್ಟಿ
* ಶ್ರೀ ವರವಿ ಮೌನೇಶ್ವರ ದೇವಸ್ಥಾನ, ಶಿರಹಟ್ಟಿ
* ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ
ಲಕ್ಷ್ಮೇಶ್ವರ ತಾಲೂಕು:
* ಶ್ರೀ ಸೋಮೇಶ್ವರ ದೇವಸ್ಥಾನ, ಲಕ್ಷ್ಮೇಶ್ವರ.
* ಶಂಖ ಬಸದಿ, ಲಕ್ಷ್ಮೇಶ್ವರ
ನರಗುಂದ ತಾಲೂಕು:
* ಶ್ರೀ ವೆಂಕಟೇಶ್ವರ ದೇವಸ್ಥಾನ.
ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ವಿಶೇಷ ಪ್ರಯತ್ನದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ಗುರುತಿಸಲಾದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ರೂಪ ಕೊಡುವ ಉದ್ದೇಶದಿಂದ ನೂತನ ಪ್ರವಾಸೋದ್ಯಮ ನೀತಿಯಡಿ ರಾಜ್ಯದ 1,275 ತಾಣಗಳನ್ನು ಗುರುತಿಸಲಾಗಿದ್ದು, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದನ್ನೂ ಓದಿ: ಮತಗಳ್ಳತನ ಸಂಬಂಧ ತೀರ್ಪಿನ ಬಳಿಕವೇ ತುರ್ತು ಪರಿಸ್ಥಿತಿ ಹೇರಿದ್ದ ಇಂದಿರಾ ಗಾಂಧಿ: ಛಲವಾದಿ ನಾರಾಯಣಸ್ವಾಮಿ