-ಬಿಸ್ಕಟ್ ಸಾಗಣೆಗಾಗಿ ಸ್ಪೆಷಲ್ ಶರ್ಟ್ ಡಿಸೈನ್
-ನಕಲಿ ಆಧಾರ್ ಕಾರ್ಡ್ ಬಳಸಿ ಪ್ರಯಾಣ
ನವದೆಹಲಿ: 43 ಕೋಟಿ ರೂ. ಮೌಲ್ಯದ 504 ಚಿನ್ನದ ಬಿಸ್ಕತ್ ಗಳನ್ನು ದೆಹಲಿಯ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ)ದ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ. ಖಚಿತ ಮಾಹಿತಿ ಪಡೆದು ಅಧಿಕಾರಿಗಳು ದೆಹಲಿಗೆ ರೈಲ್ವೇ ಮೂಲಕ ಬಂದವರನ್ನ ಖೆಡ್ಡಾಗೆ ಕೆಡವಿದ್ದಾರೆ.
ಆಗಸ್ಟ್ 28ರಂದು ಡಿಬ್ರೂಗಢನಿಂದ ಬಂದ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ತಪಾಸಣೆಗೆ ಒಳಪಡಿಸಿದಾಗ ಅವಿತುಕೊಂಡಿದ್ದ ಎಂಟು ಜನರು ಸಿಕ್ಕಿದ್ದಾರೆ. ಇವರ ಬಳಿಯಲ್ಲಿದ್ದ 86 ಕೆಜಿ ತೂಕದ 504 ಚಿನ್ನದ ಬಿಸ್ಕಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಎಂಟು ಜನರು ಚಿನ್ನ ಸಾಗಿಸಲು ಶರ್ಟ್ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಶರ್ಟ್ ಮುಂಭಾಗ ಅಂದ್ರೆ ಎದೆ ಭಾಗದಲ್ಲಿ ಚಿನ್ನದ ಬಿಸ್ಕಟ್ ಇರಿಸುವ ವ್ಯವಸ್ಥೆ ಮಾಡಿಕೊಂಡಿದ್ದರು.
ವಿಚಾರಣೆ ವೇಳೆ ಆರೋಪಿಗಳು, ಚಿನ್ನದ ಬಿಸ್ಕಟ್ ಗಳು ಮಯನ್ಮಾರ್ ನಿಂದ ಮಣಿಪುರ ಮತ್ತು ಗುವಾಹಟಿಗೆ ಬಂದಿದ್ದು, ತಮ್ಮ ಮೂಲಕ ದೆಹಲಿ ತಲುಪಿದ್ದನ್ನು ಒಪ್ಪಿಕೊಂಡಿದ್ದಾರೆ. ಈ ಚಿನ್ನವನ್ನು ದೆಹಲಿ, ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಕೆಲ ವ್ಯಕ್ತಿಗಳಿಗೆ ತಲುಪಿಸಬೇಕಿತ್ತು ಎಂದು ಹೇಳಿದ್ದಾರೆ.
ಇದರ ಹಿಂದೆ ದೊಡ್ಡ ಜಾಲವೇ ಇದ್ದು, ದೇಶದ ವಿವಿಧ ಭಾಗಗಳಲ್ಲಿನ ಬಡವರಿಗೆ ಹಣದಾಸೆ ತೋರಿಸಿ ಈ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಆಸೆಯಿಂದಾಗಿ ಯುವಕರು ಈ ಬಲೆಯಲ್ಲಿ ಸಿಲುಕಿಕಿಕೊಳ್ಳುತ್ತಿದ್ದಾರೆ. ಎಂಟು ಜನ ಬಂಧಿತರು ನಕಲಿ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸುತ್ತಿದ್ದರು. ಬಂಧಿತರು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾಗಿದ್ದಾರೆ.