ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಇತ್ತ ಸರ್ಕಾರ ಕೂಡ ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲಕ್ಕೀಡು ಮಾಡುತ್ತಿದೆ.
ಈಗಾಗಲೇ ಸೋಮವಾರದಿಂದ 14 ದಿನಗಳ ಕಾಲ ಲಾಕ್ ಡೌನ್ ಎಂದು ಘೋಷಿಸಿರುವ ಸರ್ಕಾರ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿತ್ತು. ಆದರೆ ಇದೀಗ ಈ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಇಂದು ಮತ್ತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಿದ್ದ ಸರ್ಕಾರ, ಈ ಬಾರಿ ಅದರ ಮಿತಿಯನ್ನು ಇಳಿಕೆ ಮಾಡಿದೆ. ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಈಗಾಗಲೇ ನಿಗದಿಯಾಗಿರುವ ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ತಮ್ಮ ತಮ್ಮ ಮನೆಗಳಲ್ಲೇ ಮದುವೆ ಕಾರ್ಯಕ್ರಮ ಮುಗಿಸಬೇಕು. ಈ ಹಿಂದಿ ಇದ್ದಂತಹ ನಿಯಮದಂತೆ ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು.
ಪರಿಷ್ಕೃತ ಆದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಹಾಗೂ ಸಿಮೆಂಟ್ ಗೆ ಬಳಸುವ ಲೈಮ್ ಸ್ಟೋನ್ ತಯಾರಿಕೆಗೆ ಅನುಮತಿ ನೀಡಲಾಗಿದೆ. ಇನ್ನುಳಿದಂತೆ ಹಳೆಯ ಆದೇಶಗಳೇ ಮುಂದುವರಿಯಲಿದೆ. ಇದನ್ನೂ ಓದಿ: ಅಗತ್ಯ ವಸ್ತುಗಳ ಖರೀದಿಗೆ ವಾಹನಗಳಲ್ಲಿ ಸಂಚರಿಸುವುದಕ್ಕೆ ನಿರ್ಬಂಧ- ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ