ಬೆಂಗಳೂರು: 4 ವರ್ಷದ ಕಂದಮ್ಮನ ಮೇಲೆ ದುರುಳರು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಎಲೆಕ್ಟ್ರಾನಿಕ್ ಸಿಟಿ (Electronic City) ಪೋಲಿಸ್ ಠಾಣಾ ವ್ಯಾಪ್ತಿಯ ವಿಟ್ಟಸಂದ್ರ ಬಳಿಯ ಬೋಳುಗುಟ್ಟದ ಬಳಿ ನಡೆದಿದೆ.
ಅಸ್ಸಾಂ (Assam) ಮೂಲದ ನಾಲ್ಕು ವರ್ಷದ ಬಾಲಕಿ, ವಿಟ್ಟಸಂದ್ರ ಸಮೀಪದ ಶೆಡ್ನಲ್ಲಿ ಪೋಷಕರ ಜೊತೆ ವಾಸವಿದ್ದಳು. ಪೋಷಕರು ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಗುರುವಾರ ಎಂದಿನಂತೆ ಬಾಲಕಿಯನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಬಂದು ನೋಡಿದಾಗ ಬಾಲಕಿ ಕಾಣೆಯಾಗಿದ್ದಳು. ಬಾಲಕಿ ಕಾಣೆಯಾಗುತ್ತಿದ್ದಂತೆ ಪೋಷಕರು ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲು ಮಾಡಲಾಗಿತ್ತು. ಪೊಲೀಸರು ಹುಡುಕಾಟ ನಡೆಸುತ್ತಿದ್ದ ವೇಳೆ, ಬೋಳುಗುಟ್ಟದ ನಿರ್ಜನ ನೀಲಗಿರಿ ತೋಪಿನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇದನ್ನೂ ಓದಿ: ಮಗಳಿಗೆ ಸುಮ್ಮನಿರು ಎನ್ನಬೇಡಿ, ಮಾತನಾಡು ಎನ್ನಿ: ಲಕ್ಷ್ಮಿ ಹೆಬ್ಬಾಳ್ಕರ್
ಬಾಲಕಿಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಗುವನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರವೆಸಗಿರುವ ಕಿರಾತಕರು, ತಮ್ಮ ಆಸೆ ತೀರಿಸಿಕೊಂಡ ನಂತರ ಮಗುವಿನ ಮುಖ ಮತ್ತು ದೇಹದ ಹಲವು ಕಡೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಬಂದಿದ್ದ ವಿಧಿ ವಿಜ್ಞಾನ ತಂಡ, ಶ್ವಾನ ದಳ ಸ್ಥಳದಲ್ಲಿ ಎಲ್ಲಾ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದು, ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ಕಳುಹಿಸಿದ್ದಾರೆ. ಇದನ್ನೂ ಓದಿ: 14 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ನೋಕಿಯಾ
ಇನ್ನು ಈ ಘಟನೆಯಿಂದ ಸುತ್ತಮುತ್ತಲ ಸಾರ್ವಜನಿಕರು ಬೆಚ್ಚಿಬಿದ್ದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೃತ ಅಭಿಮಾನಿಗಳಿಗೆ ಗೌರವ – ಕಪ್ಪು ತೋಳುಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಆರ್ಸಿಬಿ ಆಟಗಾರರು

