ತುಮಕೂರು: ಸಾಮಾನ್ಯವಾಗಿ ಕೃಷ್ಣ ಜಯಂತಿಯಲ್ಲಿ ತಮ್ಮ ಮುದ್ದಾದ ಮಕ್ಕಳಿಗೆ ಕೃಷ್ಣನ ವೇಷ ಹಾಕುತ್ತಾರೆ. ಆದರೆ ಕಲ್ಪತರು ನಾಡಿನಲ್ಲಿ ಹನುಮ ಜಯಂತಿ ದಿನದಂದು ಕೆಲ ಚಿಣ್ಣರು ಆಂಜನೇಯ ವೇಷಭೂಷಣದಲ್ಲಿ ಕಂಡಿದ್ದು ವಿಶೇಷವಾಗಿತ್ತು.
ವಕೀಲರಾದ ಹಿಮಾನಂದ ಮತ್ತು ರೇಖಾ ದಂಪತಿ ತಮ್ಮ ಮುದ್ದಾದ ಮಗಳಿಗೆ ಹನುಮನ ವೇಷ ತೊಡಿಸಿ ಕೈಯಲ್ಲಿ ಗದೆಯನ್ನು ಕೊಟ್ಟಿದ್ದಾರೆ. ಅಲ್ಲದೆ ಆಂಜನೇಯ ದೇವಸ್ಥಾನದ ಬೃಹತ್ ಹನುಮನ ಪ್ರತಿಮೆಯ ಮುಂದೆ ಫೋಟೋ ಕ್ಲಿಕ್ಕಿಸಿದ್ದು, ಸಖತ್ ಸದ್ದಾಗಿದೆ. ಹಿರಿ ಆಂಜನೇಯನ ಕೆಳಗೆ ಕಿರಿ ಆಂಜನೇಯ ಕಂಡು ಬಂದು ಅಚ್ಚರಿ ಮೂಡಿಸಿದ್ದಾಳೆ.
ನಾಲ್ಕು ವರ್ಷದ ಬಾಲಕಿ ತನ್ವಿ ಕೊರಳ ತುಂಬ ಮುತ್ತಿನಂಥ ಹಾರಗಳನ್ನು ಹಾಕಿ ಸಿಂಗಾರಗೊಂಡಿದ್ದಳು. ಹನುಮಂತ ಪ್ರತಿಮೆಯ ಮುಂದಿನ ರಸ್ತೆಯಲ್ಲಿ ತನ್ವಿಯನ್ನು ನಿಲ್ಲಿಸಿ ಪೋಷಕರು ಫೋಟೋ ಕ್ಲಿಕ್ಕಿಸುತ್ತಿದ್ದರೆ ಜನ ನಿಂತು ತನ್ವಿ ಸಿಂಗಾರವನ್ನು ನೋಡಿ ಸಂತೋಷಪಟ್ಟರು.
ತನ್ವಿಳ ಎಡಗೈಯಲ್ಲಿದ್ದ ಗದೆಯನ್ನು ನೆಲಕ್ಕೆ ಒತ್ತಿ ಹಿಡಿದು ಫೋಟೋವೊಂದಕ್ಕೆ ಪೋಸ್ ನೀಡಿದ್ದಾಳೆ. ಸದ್ಯ ಬಾಲ ಆಂಜನೇಯನ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.