ರಾಮನಗರ: ಚನ್ನಪಟ್ಟಣದಲ್ಲಿ (Channapatna) ಕಾಡಾನೆಗಳ ಉಪಟಳ ಮುಂದುವರಿದಿದ್ದು, ಊರಹಬ್ಬದ ದಿನವೇ ಗ್ರಾಮಕ್ಕೆ ಕಾಡಾನೆಗಳು ಎಂಟ್ರಿಯಾಗಿದ್ದು, ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿರುವ ಘಟನೆ ಚನ್ನಪಟ್ಟಣ ಟೌನ್ ಸಮೀಪದ ಕರಿಯಪ್ಪನದೊಡ್ಡಿಯಲ್ಲಿ ನಡೆದಿದೆ.
ಚನ್ನಪಟ್ಟಣದ ಮೆಹದಿನಗರ ಹಾಗೂ ಪಕ್ಕದ ಬಡಾವಣೆಯಲ್ಲೂ ಕಾಡಾನೆಗಳ ಹಿಂಡು ಸಂಚಾರ ಮಾಡಿ ನಿವಾಸಿಗಳಿಗೆ ಭಯಹುಟ್ಟಿಸಿವೆ. ಕರಿಯಪ್ಪನದೊಡ್ಡಿ ಗ್ರಾಮದಲ್ಲಿ ಊರಹಬ್ಬ ನಡೆಯುವ ವೇಳೆ ಏಕಾಏಕಿ ನಾಲ್ಕು ಕಾಡಾನೆಗಳು ಗ್ರಾಮಕ್ಕೆ ಬಂದಿವೆ. ಈ ವೇಳೆ ದೇವಾಲಯದ ಸಮೀಪ ಇದ್ದ ಜನ ಎದ್ನೋಬಿದ್ನೋ ಎಂದು ಸ್ಥಳದಿಂದ ಓಡಿದ್ದಾರೆ. 4 ಕಾಡಾನೆಗಳು ರಾತ್ರಿ ಇಡೀ ಜನವಸತಿ ಪ್ರದೇಶದಲ್ಲೇ ತಿರುಗುತ್ತಾ ದಾಂಧಲೆ ಎಬ್ಬಿಸಿದ್ದು, ಮೆಹದಿನಗರದ ಖಾಸಗಿ ಲೇಔಟ್ನ ಕಾಂಪೌಂಡ್ ಧ್ವಂಸ ಮಾಡಿವೆ. ಇದನ್ನೂ ಓದಿ: ರಾಯಚೂರು| ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ
ಕಾಡಾನೆಗಳ ಹಿಂಡು ಕಂಡು ಚನ್ನಪಟ್ಟಣ ಜನತೆ ಬೆಚ್ಚಿಬಿದ್ದಿದ್ದು, ಕಾಡಾನೆಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಕಾಡಾನೆಗಳು ಬಂದಿವೆ. ಶೀಘ್ರವೇ ಅವುಗಳನ್ನ ಕಾಡಿಗಟ್ಟುವ ಭರವಸೆ ನೀಡಿದ್ದಾರೆ. ಅಲ್ಲದೇ ಕಾಡಾನೆಗಳ ಚಲನವಲನಗಳ ಮೇಲೆ ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Champions Trophy Final: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ದೇವರಿಗೆ ವಿಶೇಷ ಪೂಜೆ