ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನರ್ಹ ಶಾಸಕರ ವಿರುದ್ಧ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಅಭ್ಯರ್ಥಿಗಳ ಪೈಕಿ ನಾಲ್ವರು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ಹೊಸಕೋಟೆಯ ಶರತ್ ಬಚ್ಚೇಗೌಡ, ಕಾಗವಾಡದ ರಾಜು ಕಾಗೆ, ಹಿರೇಕೆರೂರಿನ ಯು.ಬಿ. ಬಣಕಾರ್ ಹಾಗೂ ಗೋಕಾಕ್ನ ಅಶೋಕ್ ಪೂಜಾರಿ ಅವರನ್ನು ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದೆ.
ಆದರೆ ಇದನ್ನು ಒಪ್ಪಿಕೊಳ್ಳದೆ ಡಿ.5 ರಂದು ನಿಗದಿಯಾಗಿರುವ ಉಪ ಚುನಾವಣೆಗೆ ಟಿಕೆಟ್ ಬೇಕೆಂದು ಇವರೆಲ್ಲ ಪಟ್ಟು ಹಿಡಿದಿದ್ದಾರೆ. ಈ ಕ್ಷೇತ್ರಗಳಲ್ಲಿ ಅನರ್ಹ ಶಾಸಕರು ಬಿಜೆಪಿ ಪರ ಕಣಕ್ಕೆ ಇಳಿಯುವುದು ಬಹುತೇಕ ನಿಶ್ಚಿತವಾಗಿದೆ. ಹೀಗಾಗಿ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಗೆ ಪರಾಜಿತರು ಒಲವು ತೋರಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈಗಾಗಲೇ ಈ ನಾಲ್ವರು ತಮ್ಮ ಒಲವನ್ನು ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದು ಈ ಬಗ್ಗೆ ಒಂದೆರಡು ಸುತ್ತಿನ ಸಮಾಲೋಚನೆಗಳು ನಡೆದಿವೆ ಎನ್ನಲಾಗಿದೆ.