ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಕೆರೆ ಕುಂಟೆ ನದಿ ನಾಲೆ ಜಲಾಶಯ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆ ಚಿಕ್ಕಳ್ಳಾಪುರ ಜಿಲ್ಲೆಯಲ್ಲಿ 4 ಕೆರೆ ಕಟ್ಟೆಗಳು ಒಡೆದು ಹೋಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಕಳೆದ ರಾತ್ರಿ ಸುರಿದ ಮಳೆಗೆ ಶಿಡ್ಲಘಟ್ಟ ತಾಲೂಕಿನ ಅನೆಮಡುಗು ಗ್ರಾಮದ ಬಳಿಯ ಅಗ್ರಹಾರ ಕೆರೆ, ಚೊಕ್ಕನಹಳ್ಳಿ ಗ್ರಾಮದ ಕೆರೆ, ಚಿಕ್ಕಬಂದರಘಟ್ಟ ಕರೆ ಹಾಗೂ ಪಾಪತಿಮ್ಮನಹಳ್ಳಿ ಕೆರೆ ಕಟ್ಟೆಗಳು ಒಡೆದು ಹೋಗಿದೆ. ಕೆರೆ ಕಟ್ಟೆಗಳು ಒಡೆದ ಪರಿಣಾಮ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕೆರೆಗಳ ಕೆಳ ಭಾಗದ ರೈತರು ಬೆಳೆದ ಬೆಳೆಗಳಲ್ಲೆವೂ ನೀರು ಪಾಲಾಗಿವೆ. ಇದನ್ನೂ ಓದಿ: ಪರ್ಸೆಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ
ಮೈದುಂಬಿದ ಕೆರೆಗೆಳಲ್ಲಿನ ನೀರೆಲ್ಲವೂ ಖಾಲಿಯಾಗಿ ಜನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ವೇ? ಎಂದು ದುಃಖ ಪಟ್ಟುಕೊಳ್ಳುತ್ತಿದ್ದಾರೆ. ಕಣ್ಣೆದುರೇ ತಮ್ಮೂರಿನ ಕೆರೆಗಳ ನೀರು ಖಾಲಿಯಾಗಿ ಹರಿದು ಹೋಗಿದ್ದು, ಜನರಿಗೆ ನೋವು ತಂದಿದೆ. ಇನ್ನೂ ಗೋಣಿಮರದಹಳ್ಳಿ ಗ್ರಾಮದ ಜನರಿಗೆ ಕೆರೆ ಕಟ್ಟೆ ಒಡೆದು ಆತಂಕ ಶುರುವಾಗಿದೆ. ಲಗಿನಾಯಕನಹಳ್ಳಿ ಬಳಿಯ ಕೆರೆ ಕಟ್ಟೆಯ ಬಳಿ ಮಣ್ಣು ಕುಸಿತ ಆಗಿದೆ ಎನ್ನಲಾಗಿದ್ದು, ಕೆರೆ ಕಟ್ಟೆ ಒಡೆದು ಆತಂಕ ಶುರುವಾಗಿದೆ.
ಗೋಣಿಮರದಹಳ್ಳಿ ಬೃಹತ್ ಕಾಲುವೆ ಇದ್ದು, ಕೆರೆ ಒಡೆದು ಹೋದರೆ ಅಪಾರ ಪ್ರಮಾಣದ ನೀರು ಗ್ರಾಮದೊಳಗೆ ನುಗ್ಗಲಿದೆ. ಕಳೆದ ರಾತ್ರಿ ಸಹ ಧಾರಾಕಾರ ಮಳೆಗೆ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಕುರಿಗಳು ಹಾಗೂ ಪೆಟ್ಟಿಗೆ ಅಂಗಡಿಗಳು ಕೊಚ್ಚಿ ಹೋಗಿವೆ. ಲಗಿನಾಯಕನಹಳ್ಳಿ ಬಳಿ ಡಾಂಬರು ರಸ್ತೆ ಸಹ ಕೊಚ್ಚಿ ಹೋಗಿದೆ. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ