ಕಾರವಾರ: ದೇವಿ ಕನಸಿನಲ್ಲಿ ಬಂದು ನಿಧಿ ತೋರಿಸಿದಳು ಎಂದು ಕಾರವಾರ (Karwar) ತಾಲ್ಲೂಕಿನ ಶಿರವಾಡದಲ್ಲಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನಿಧಿ (Treasure) ಶೋಧನೆಗಾಗಿ 15 ಅಡಿಗೂ ಹೆಚ್ಚು ಆಳವಾದ ಬಾವಿ (Well) ತೋಡಿದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಫೋನ್ಗಳು, ಪಿಕಾಸಿ ಸೇರಿದಂತೆ ವಿವಿಧ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.
ಶಿರವಾಡದಲ್ಲಿ ನೆಲೆಸಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹಿದಾಯತ್ ಅಬ್ದುಲ್ ಗನಿ (43), ಶಿರವಾಡದ ರುಸ್ತುಂ ರಜಾಕ್ ಸಾಬ್ ಪಠಾಣ್ (55), ಉತ್ತರ ಪ್ರದೇಶದ ಗೋರಖ್ ಪುರದ ಹರ್ಷದ್ ಅಲಿ ಹೈದರ್ ಅಲಿ ಅನ್ಸಾರ್ (21) ಹಾಗೂ ಶಿರವಾಡದ ಸರಫ್ರಾಜ್ ಅಬೀಬ್ ಉಲ್ಲಾ ಸಲ್ಮಾನಿ (25) ಬಂಧಿತರು. ಇದನ್ನೂ ಓದಿ: ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್ ಪ್ರಚೋದನಕಾರಿ ಭಾಷಣ
ಕಾಡಿನ ನಡುವೆ ಇರುವ ದೊಡ್ಡ ಬಂಡೆಗೆ ಪೂಜೆ ಸಲ್ಲಿಸಿದ್ದ ಆರೋಪಿಗಳು, ಅದರ ಸಮೀಪದಲ್ಲೇ 15 ಕ್ಕೂ ಹೆಚ್ಚು ಅಡಿಗಳ ಬಾವಿಯನ್ನು ತೋಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದಾಳಿ ಮಾಡಿದ್ದರಿಂದ ಆರೋಪಿಗಳು ಅಲ್ಲೇ ಸಿಕ್ಕಿಬಿದ್ದರು. ಅಲ್ಲಿದ್ದ ಕಲ್ಲುಗಳಿಗೆ ಅರಿಶಿನ-ಕುಂಕುಮ ಹಚ್ಚಿ, ನಿಂಬೆಹಣ್ಣಿನ ಹಾರ ಹಾಕಿ ಆರತಿ ಮಾಡಿದ್ದೂ ಕಂಡುಬಂದಿದೆ.
ಕೃತ್ಯದ ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್ ಗನಿಯನ್ನು ಅರಣ್ಯಾಧಿಕಾರಿಗಳು ಕಾದಿಟ್ಟ ಅರಣ್ಯದಲ್ಲಿ ಬಾವಿ ತೋಡಿರುವ ಕುರಿತು ವಿಚಾರಣೆಗೆ ಒಳಪಡಿಸಿದಾಗ, ಕಳೆದ ಅಮಾವಾಸ್ಯೆಯ ದಿನ ರಾತ್ರಿ ನಮಗೆ ಶಿರಸಿಯ ಮಾರಿಕಾಂಬೆ ಕನಸಿನಲ್ಲಿ ಬಂದು ಇಲ್ಲಿ ಪೂಜೆ ಸಲ್ಲಿಸಲು ತಿಳಿಸಿದ್ದಾಳೆ. ಹಾಗಾಗಿ ನಾವು ಬಾವಿ ತೋಡುತ್ತಿದ್ದೇವೆ. ನಾವು ಯಾವುದೇ ಮರವನ್ನೂ ಕತ್ತರಿಸಿಲ್ಲ ಎಂದು ಸಮಜಾಯಿಸಿ ನೀಡಿದ್ದ. ನಂತರ ತನಿಖೆ ವೇಳೆ ತಾವು ನಿಧಿಗಾಗಿ ಶೋಧ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಮುಂಭಾಗದಲ್ಲೇ ಬಿಯರ್ ಪಾರ್ಟಿ – ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರ ಮೋಜು ಮಸ್ತಿ
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ರೂಪಾ ಥಾಮ್ಸೆ, ನವೀನ ಶೆಟ್ಟಿ, ಅರಣ್ಯ ರಕ್ಷಕರಾದ ವೀಣಾ ದೇವಾಡಿಗ, ಸಂಜೀವ ಅಸ್ನೋಟಿಕರ್, ಅರಣ್ಯ ವೀಕ್ಷಕರಾದ ಮಧುಕರ ಗುನಗಿ, ದೇವಿದಾಸ ಗುನಗಿ, ಶಶಿಕಾಂತ ಗುನಗಿ ಹಾಗೂ ಸಿಬ್ಬಂದಿ ಶಶಿಕಾಂತ ಗೋವೇಕರ್ ಭಾಗವಹಿಸಿದ್ದು, ಆರೋಪಿಗಳ ವಿರುದ್ಧ 1963ರ ಅರಣ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.