– ಡಿವೈಡರ್ಗೆ ಡಿಕ್ಕಿ ಹೊಡೆದ ಕಾರಿಗೆ ಲಾರಿ ಡಿಕ್ಕಿ
ಹೈದರಾಬಾದ್: ಮದುವೆಯಾದ ನಾಲ್ಕೇ ದಿನಕ್ಕೆ ನವದಂಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕೈಕಾರಂ ಗ್ರಾಮದ ಬಳಿ ಈ ಘಟನೆ ನಡೆದಿದೆ. ವರ ವೆಂಕಟೇಶ್ (30) ಮತ್ತು ವಧು ಮಾನಸ ನವ್ಯಾ ಮೃತ ದುರ್ದೈವಿಗಳು. ಸಾಫ್ಟ್ ವೇರ್ ಎಂಜಿನಿಯರ್ ವೆಂಕಟೇಶ್ ಮತ್ತು ಮಾನಸ ನವ್ಯಾ ಕಳೆದ ವಾರ ಅಂದರೆ 14 ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು.
ತೆನಾಲಿ ಬಳಿಯ ಗೋವಾಡ ಗ್ರಾಮದಲ್ಲಿರುವ ನವ್ಯಾ ಮನೆಯಲ್ಲಿ ಮೂರು ದಿನ ನವ ಜೋಡಿ ಇದ್ದರು. ಗುರುವಾರ ವಿಶಾಖಪಟ್ಟಣಂ ಜಿಲ್ಲೆಯ ವರ ವೆಂಕಟೇಶ್ ಮನೆಗೆ ಕಾರಿನಲ್ಲಿ ಹೊರಟ್ಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಮೊದಲಿಗೆ ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ನಂತರ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಗಾಯಗೊಂಡಿದ್ದವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ನವ ಜೋಡಿ ಸೇರಿದಂತೆ ಕಾರಿನ ಚಾಲಕ ಕೂಡ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.