ದಾವಣಗೆರೆ: ಸಿಎಂ ಕುಮಾರಸ್ವಾಮಿ ಅವರು ಅಧಿಕಾರದ ಮದ ಹಾಗೂ ಸೊಕ್ಕಿನಿಂದ ಎಲ್ಲರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಲೋಕಸಭಾ ಚುನಾವಣೆ ನಡೆದ ಬಳಿಕ ಅವರೆಲ್ಲಿರುತ್ತಾರೆ ಅಂತ ನಾವು ನೀವು ಹುಡುಕೋಣ ಎಂದು ಬಿಜೆಪಿ ರಾಜ್ಯಾಧಕ್ಷ ಬಿ.ಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದೇ ಅಕ್ಷಮ್ಯ ಅಪರಾಧ. 38 ಸೀಟ್ ತೆಗೆದುಕೊಂಡು ಸಿಎಂ ಆದವರು 108 ಸೀಟ್ ತೆಗೆದುಕೊಂಡವರ ಬಗ್ಗೆ ಮಾತಾಡ್ತಾರೆ. ಸೊಕ್ಕಿನಿಂದ ಮತನಾಡುವ ಅವರಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜಿ.ಎಂ. ಸಿದ್ದೇಶ್ವರ್ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಗೆದ್ದಿದ್ದಾರೆ. ರಾಜ್ಯದಲ್ಲಿ ಬಿಜೆಪಿ 22 ಕ್ಷೇತ್ರ, ದೇಶದಲ್ಲಿ 300 ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ದೇವೇಗೌಡರು ಸೋಲೋದು ಖಚಿತ, ಅಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆಲ್ಲುತ್ತಾರೆ. ಸದ್ಯ ಮಂಡ್ಯದಲ್ಲಿ ಐಟಿ ರೇಡ್ ಬಗ್ಗೆ ಹಗುರವಾಗಿ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ ಹಣದಲ್ಲಿ 1,344 ಕೋಟಿ ರೂ. ಅಕ್ರಮ ನಡೆದಿದೆ. 5 ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಮೈತ್ರಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಈಗ 5 ಕಾಮಗಾರಿಗಳಿಗೂ ಹಣ ಪಾವತಿಸಿ ಸಿಕ್ಕಿ ಬಿದ್ದಿದ್ದಾರೆ. ಇನ್ನೂ ಅನೇಕ ಹಗರಣ ಬಯಲಾಗತ್ತವೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳ ಚುನಾವಣೆ ಮುಗಿದ ಮೇಲೆ ಮನೆ ಕಡೆ ಹೋಗಬೇಕಾಗುತ್ತದೆ ಎಂದು ಟೀಕಿಸಿದರು.
ನಂತರ ದೇಶ ಸಾಕಷ್ಟು ಅಭಿವೃದ್ಧಿ ಆಗಿದೆ. ಹೊರ ದೇಶದ ಹೂಡಿಕೆದಾರರು ದೇಶದ ಕಡೆ ಮುಖ ಮಾಡುತ್ತಿದ್ದಾರೆ. 16 ಲಕ್ಷ ಕೋಟಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಮೋದಿ ಸರ್ಕಾರ ಬಹಳಷ್ಟು ಅಭಿವೃದ್ಧಿಯನ್ನು ದೇಶದಲ್ಲಿ ಮಾಡಿದೆ ಎಂದು ತಿಳಿಸಿದರು.