ಬಳ್ಳಾರಿ: ಕೇಂದ್ರ ಸರ್ಕಾರ (Union Government) ಸಬ್ಸಿಡಿ ದರದಲ್ಲಿ ರೈತರಿಗೆ ನೀಡಿದ್ದ ಯೂರಿಯಾ ಗೊಬ್ಬರವನ್ನು (Subsidy Urea) ಖದೀಮರು ಚೀಲ ಬದಲಾಯಿಸಿ, ಅನ್ಯ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಬಳ್ಳಾರಿ ಪೊಲೀಸರು (Ballari Police) ಬೇಧಿಸಿದ್ದಾರೆ.
ಬಳ್ಳಾರಿಯ ಇಂಡಸ್ಟ್ರೀಸ್ ಏರಿಯಾದಲ್ಲಿನ ಗೋಡೌನ್ ಒಂದರಲ್ಲಿ 3,575 ಚೀಲ ಯೂರಿಯಾ ಗೊಬ್ಬರವನ್ನ ಅಕ್ರಮವಾಗಿ ಸಂಗ್ರಹಿಸಿಡಲಾಗಿತ್ತು. ಪೊಲೀಸರು ದಾಳಿ ಮಾಡಿ ಯೂರಿಯಾ ಗೊಬ್ಬರ ಜಪ್ತಿ ಮಾಡಿದ್ದಾರೆ.
ಕೇಂದ್ರ ಸರ್ಕಾರದಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಬರುವ ಯೂರಿಯಾ ಗೊಬ್ಬರವನ್ನ ರೈತರಿಗೆ (Farmers) ನೀಡದೇ ಅಕ್ರಮವಾಗಿ ಸಂಗ್ರಹಿಸಿ, ಆ ಬಳಿಕ ಚೀಲ ಬದಲಾಯಿಸಿ, ಕಾರ್ಖಾನೆಗಳಿಗೆ ವಿತರಣೆ ಮಾಡಲಾಗುತ್ತಿತ್ತು. ರಾಜ್ಯ ಮಾತ್ರವಲ್ಲದೇ ನೆರೆಯ ಕೇರಳ (Kerala) ರಾಜ್ಯಕ್ಕೂ ಸರಬರಾಜು ಮಾಡುತ್ತಿದ್ದ ದಂಧೆ ಇದೀಗ ಬಟಾಬಯಲಾಗಿದೆ. ಈ ಮೂಲಕ ಬಳ್ಳಾರಿಯಲ್ಲಿ ಯೂರಿಯ ಗೊಬ್ಬರ ಅಕ್ರಮ ಸಾಗಾಟ ಜಾಲಕ್ಕೆ ಕೇರಳದ ನಂಟು ಕಂಡುಬಂದಿದ್ದು, ಕೇರಳ ಮೂಲದ ವಿಪಿನ್ ಅಲಿಯಾಸ್ ಕಾರ್ತಿಕ್ ಸಿಂಗ್ ಸೇರಿದಂತೆ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗುರುವಾರ ಕಾರ್ಮಿಕ ಸಂಘಟನೆಗಳಿಂದ ಭಾರತ್ ಬಂದ್
ಮುಂಗಾರು ಹಾಗೂ ಹಿಂಗಾರು ಬಿತ್ತನೆ ವೇಳೆ ರಾಜ್ಯದ ಹಲವು ಕಡೆ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿ, ರೈತರು ಪರದಾಡಿದ್ದರು. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಹಾಗೂ ಬೇರೆ ಕಡೆ ಮಾರಾಟ ಮಾಡುತ್ತಿರುವುದು ಈಗ ಬಯಲಾಗಿದೆ.
ಈ ದಂಧೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳೂ ಶಾಮೀಲಾಗಿರುವ ಬಗ್ಗೆಯೂ ಸಂಶಯ ಇದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ಯೂರಿಯಾ ಗೊಬ್ಬರವನ್ನ ಕೇರಳ, ತಮಿಳುನಾಡು ಸೇರಿದಂತೆ ಶ್ರೀಲಂಕಾಗೂ ಕಳಿಸಲಾಗ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

