ತಿರುವನಂತಪುರಂ: ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ವಿದ್ಯಾರ್ಥಿಗಳು ರಸ್ತೆಬದಿಯಲ್ಲಿ ಉಪಹಾರವನ್ನು ಮಾರಾಟ ಮಾಡುತ್ತಿರುವ ಅಪರೂಪದ ದೃಶ್ಯ ಕೇರಳದ ತುರಾವೂರ್ ನಲ್ಲಿ ಕಂಡು ಬಂದಿದೆ.
ತುರಾವೂರ್ ನ ಶ್ರೀ ಗೋಕುಲಂ ಎಸ್ಎನ್ಜಿಎಂ ಕ್ಯಾಟರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಸ್ನೇಹಿತನ ಸಹೋದರಿಯ ಕಿಡ್ನಿ ಕಸಿ ಚಿಕಿತ್ಸೆಗಾಗಿ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುತ್ತಿದ್ದಾರೆ. ಸಹೋದರಿಯ ಕುಟುಂಬಸ್ಥರ ಬಳಿ ಚಿಕಿತ್ಸೆಗಾಗಿ ಕಡಿಮೆ ಹಣವಿದೆ. ಹಾಗಾಗಿ ವಿದ್ಯಾರ್ಥಿಗಳು ಎಲ್ಲರೂ ರಸ್ತೆಬದಿಯಲ್ಲಿ ಉಪಹಾರ ಮಾರಾಟ ಮಾಡುವ ಮೂಲಕ ಸ್ನೇಹಿತನಿಗೆ ಸಹಾಯ ಮಾಡುತ್ತಿದ್ದಾರೆ.
ಕೆ.ಎಸ್ ಅರೋಮಲ್ ಅವರ ಸಹೋದರಿ ಐಶ್ವರ್ಯಾ ಕಿಡ್ನಿ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಐಶ್ವರ್ಯಾ ಅವರ ಚಿಕಿತ್ಸೆಗಾಗಿ ಕುಟುಂಬಸ್ಥರು ಜಮೀನು ಮಾರಾಟ ಮಾಡಿದ್ದರು. ವೈದ್ಯರ ಪ್ರಕಾರ, ಐಶ್ವರ್ಯಾಳಿಗೆ ಕಿಡ್ನಿ ಕಸಿ ಮಾಡಬೇಕಾಗುತ್ತದೆ. ಇದರಿಂದ ಅವರ ಪ್ರಾಣ ಉಳಿಯುತ್ತೆ ಎಂದು ಹೇಳಿದ್ದಾರೆ.
ಐಶ್ವರ್ಯಾಳ ಆರೋಗ್ಯದ ಸ್ಥಿತಿ ಬಗ್ಗೆ ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತಿಳಿಯಿತು. ಆಗ ಅವರು ಚಿಕಿತ್ಸೆಗಾಗಿ ಅರೋಮಲ್ಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಈ ಬಗ್ಗೆ ಅಶ್ವಿನ್ ಎಂಬವರು ಮಾತನಾಡಿ, ಸ್ನೇಹಿತರ ಜೊತೆ ಸೇರಿ ರಸ್ತೆಬದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದೇವೆ. ಇದರಿಂದ ಪ್ರತಿದಿನ 4 ಸಾವಿರದಿಂದ 5 ಸಾವಿರ ರೂ.ವರೆಗೂ ಸಂಪಾದಿಸುತ್ತಿದ್ದೇವೆ. ಗ್ರಾಮದ ಜನರು ಕೂಡ ಸಹಾಯ ಮಾಡಲು ಮುಂದಾಗಿದ್ದಾರೆ ಎಂದರು.
ಐಶ್ವರ್ಯಾ ತಂದೆ ಕೂಡ ಪ್ರತಿಕ್ರಿಯಿಸಿ, ಚಿಕಿತ್ಸೆಗಾಗಿ 20 ಲಕ್ಷಕ್ಕಿಂತ ಹೆಚ್ಚು ಖರ್ಚು ಆಗಲಿದೆ. ಮೊದಲು ಐಶ್ವರ್ಯಾಳಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.