– ಶಾಲೆಯಲ್ಲಿ ಪಾಠ ಮಾಡೋ ಶಿಕ್ಷಕರೇ ಹಾಕಿಲ್ಲ ಮಾಸ್ಕ್
ಬಳ್ಳಾರಿ: ಕೊರೊನಾ ಮಹಾಮಾರಿ ಅಟ್ಟಹಾಸ ನಡೆಸುತ್ತಿರುವ ಈ ಸಮಯದಲ್ಲಿ ಶಾಲೆಯನ್ನು ಯಾವಾಗ ಆರಂಭ ಮಾಡಬೇಕು ಎನ್ನುವ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಗಣಿನಾಡು ಬಳ್ಳಾರಿಯಲ್ಲಿ ಸರ್ಕಾರಿ ಶಾಲೆಯೊಂದನ್ನು ಆರಂಭವಾಗಿದೆ.
ಹೌದು ಸರ್ಕಾರ ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿ ಮಕ್ಕಳನ್ನು ಶಾಲೆಯಿಂದ ದೂರ ಉಳಿಯದಂತೆ ವಠಾರ ಶಾಲೆ ಆರಂಭ ಮಾಡಿದೆ. ಆದರೆ ಶಿಕ್ಷಣ ಇಲಾಖೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಬಳ್ಳಾರಿ ದುರ್ಗಾಮ್ಮ ದೇವಸ್ಥಾನದ ಬಳಿ ಇರುವ ಸರ್ಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಯನ್ನು ಶಿಕ್ಷಕರು ಆರಂಭ ಮಾಡಿದ್ದಾರೆ.
ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳು ಜೀವದ ಜೊತೆಯಲ್ಲಿ ಇಲ್ಲಿನ ಶಿಕ್ಷಕರು ಚೆಲ್ಲಾಟ ಆಡುತ್ತಿದ್ದಾರೆ. ಶಾಲಾ ಕೊಠಡಿಯ ಒಳಗಡೆಯೇ ಮಕ್ಕಳನ್ನು ಕೂರಿಸಿ ಪಾಠ ಮಾಡುತಿದ್ದಾರೆ. ವಿಪರ್ಯಾಸವೆಂದರೆ ಪಾಠ ಮಾಡುವ ಶಿಕ್ಷಕರೇ ಮಾಸ್ಕ್ ಹಾಕಿಲ್ಲ. ಜೊತೆಗೆ ಹಲವಾರು ಮಕ್ಕಳು ಶಾಲೆಗೆ ಮಾಸ್ಕ್ ಧರಿಸದೇ ಬಂದಿದ್ದಾರೆ. 31 ಸಾವಿರ ಸೋಂಕಿತರು ಇರುವ ಜಿಲ್ಲೆಯಲ್ಲಿ ಇದೆಂತಾ ನಿರ್ಲಕ್ಷ್ಯ ಎಂದು ಜನರು ಪ್ರಶ್ನೆ ಮಾಡಿದ್ದಾರೆ.