ಚಿತ್ರದುರ್ಗ: ಬೆಸ್ಕಾಂ ನೌಕರರ ನಿರ್ಲಕ್ಷ್ಯದಿಂದಾಗಿ ಮುನ್ನೂರಕ್ಕೂ ಹೆಚ್ಚು ಟಿವಿಗಳು ಕರೆಂಟ್ ಗೆ ಆಹುತಿಯಾಗಿದ್ದು, ಟಿವಿಗಳನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಕೂಲಿ ನಾಲಿ ಮಾಡಿ ಬದುಕುವ ಕಡು ಬಡ ಕುಟುಂಬಗಳೇ ಹೆಚ್ಚಾಗಿ ವಾಸಿಸುತ್ತಿರೊ ವೆಂಕಟೇಶ್ವರ ಬಡಾವಣೆಯು ಇಂಡಸ್ಟ್ರಿಯಲ್ ಏರಿಯಾ ಪಕ್ಕದಲ್ಲಿದ್ದು, ವಿದ್ಯುತ್ ವೋಲ್ಟೇಜ್ ಏರುಪೇರಾಗಿ ವಿದ್ಯುತ್ ಉಪಕರಣಗಳೆಲ್ಲಾ ಆಹುತಿಯಾಗಿವೆ. ಅಷ್ಟೇ ಅಲ್ಲದೇ ಒಂದೇ ವರ್ಷದಲ್ಲಿ ನಾಲ್ಕು ಬಾರಿ ಬಡವರ ಮನೆಗಳಲ್ಲಿರೋ ಟಿವಿ, ಮಿಕ್ಸಿ, ಫ್ಯಾನ್ ಹಾಗು ಬೆಲೆಬಾಳುವ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದ್ದು, ನಾಗರೀಕರು ಮನೆಯಲ್ಲಿ ವಾಸಿಸಲು ಭಯಪಡುವಂತಾಗಿದೆ.
ಈ ಬಗ್ಗೆ ಹಲವು ಬಾರಿ ಚಿತ್ರದುರ್ಗದ ಹಿರಿಯ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ದಿನ ತಡವಾದರು ವಿದ್ಯುತ್ ಕಟ್ ಮಾಡುವ ಬೆಸ್ಕಾಂ ನೌಕರರು, ಸಮಸ್ಯೆ ಆದಾಗ ಮಾತ್ರ ತಿರುಗಿ ನೋಡಲ್ಲ ಎಂದು ನಾಗರೀಕರು ಬೆಸ್ಕಾಂ ಇಲಾಖೆಗೆ ಹಿಡಿಶಾಪ ಹಾಕಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.