ಬೆಳಗಾವಿ: ನೆರೆಯ ಮಹಾರಾಷ್ಟ್ರದಿಂದ ತಮಿಳುನಾಡಿನ ಸೇಲಂಗೆ ಅಕ್ರಮವಾಗಿ ಬೆಳ್ಳಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಭಾನುವಾರ ಡಿಸಿಐಬಿ ಪೊಲೀಸರು ಬಂಧಿಸಿ, ಅವರಿಂದ 300 ಕೆಜಿ ಬೆಳ್ಳಿಗಟ್ಟಿ ಸೇರಿದಂತೆ ಒಟ್ಟು 78 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಸೇಲಂನ ಸವಾಪೇಟನ ನಿವಾಸಿ ವಿಜಯಕುಮಾರ್ ಆತ್ಮಾರಾಮ ಶಿಂಧೆ (48) ಹಾಗೂ ಸಾತಾರ ಜಿಲ್ಲೆಯ ಬೆಳವಾಡಿಯ ರಿಯಾಜ್ ಶಾಕೀರಹುಸೇನ್ ಮುಲ್ಲಾ (20) ಬಂಧಿತರು. ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳ್ಳಿ ಗಟ್ಟಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದಾದಬಾನಹಟ್ಟಿಕ್ರಾಸ್ ಹತ್ತಿರ ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ 63 ಲಕ್ಷ ರೂ. ಮೌಲ್ಯದ ಬೆಳ್ಳಿ ಗಟ್ಟಿ, ಆಭರಣ, 3 ಲಕ್ಷ ರೂ. ನಗದು ಹಾಗೂ 9 ಲಕ್ಷ ರೂ. ಮೌಲ್ಯದ ಕಾರ್ ಸೇರಿದಂತೆ ಒಟ್ಟು 78 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಡಿಸಿಐಬಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ್, ಯಮಕನಮರಡಿ ಠಾಣೆಯ ಪಿಎಸ್ಐ ರಮೇಶ್ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಡಿ.ಕೆ.ಪಾಟೀಲ್, ಟಿ.ಕೆ.ಕೊಳಚಿ, ಎಂ.ಜಿ.ಮುಜಾವರ, ಎಸ್.ಎಂ.ಮಂಗಣ್ಣವರ್, ಎಂ.ಐ.ಪಠಾಣ, ವಿ.ಆರ್.ನಾಯಕ,ಆರ್.ಬಿ. ಕಲ್ಲೊಳ್ಳಿ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.